ಮೈಸೂರಲ್ಲಿ ಓಂಪ್ರಕಾಶ್ ಕುಟುಂಬ ಸದಸ್ಯರ ಅಂತ್ಯಕ್ರಿಯೆ

ಮೈಸೂರು,ಆ.17(ಆರ್‍ಕೆ)- ಶುಕ್ರವಾರ ಮುಂಜಾನೆ ಗುಂಡ್ಲುಪೇಟೆ ಹೊರ ವಲಯದಲ್ಲಿ ದುರಂತ ಸಾವಿಗೀಡಾದ ಉದ್ಯಮಿ ಓಂಪ್ರಕಾಶ್ ಸೇರಿ ಅವರ ಕುಟುಂಬದ ಐವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಅನಿಲ ಚಿತಾಗಾರದಲ್ಲಿ ನಡೆಯಿತು.

ಓಂಪ್ರಕಾಶ್ ಅವರ ಚಿಕ್ಕಪ್ಪ ಗೋಪಾಲ ಭಟ್ಟಾ ಚಾರ್ಯ, ಅಕ್ಕ ಶ್ರೀಮತಿ ನಂದಿನಿ ಹಾಗೂ ಸಂಬಂ ಧಿಕರು ಬ್ರಾಹ್ಮಣ ಸಂಪ್ರದಾಯದಂತೆ ವಿಧಿ-ವಿಧಾನ ಪೂರೈಸಿದ ನಂತರ ಓಂಪ್ರಕಾಶ್, ಪತ್ನಿ ಶ್ರೀಮತಿ ನಿಹಾರಿಕ ಅಲಿಯಾಸ್ ನಿಖಿತಾ, ಪುತ್ರ ಆರ್ಯಕೃಷ್ಣ, ತಂದೆ ನಾಗರಾಜ ಭಟ್ಟಾಚಾರ್ಯ ಹಾಗೂ ತಾಯಿ ಶ್ರೀಮತಿ ಹೇಮಲತಾ ಅವರ ಅಂತ್ಯಕ್ರಿಯೆ ನೆರವೇರಿಸಿ ದರು. ಶುಕ್ರವಾರ ರಾತ್ರಿ 8.30 ಗಂಟೆ ವೇಳೆಗೆ ಮರಣೋ ತ್ತರ ಪರೀಕ್ಷೆ ನಂತರ ಚಾಮರಾಜನಗರದಿಂದ ಐದೂ ದೇಹಗಳನ್ನು ಮೈಸೂರಿಗೆ ತಂದು ದಟ್ಟಗಳ್ಳಿಯ ಓಂಪ್ರಕಾಶ್ ಅವರ ಮನೆ ಬಳಿ ಇರಿಸಲಾಗಿತ್ತು.

ಮಳೆ ಇದ್ದ ಕಾರಣ ಮನೆ ಮುಂದೆ ರಸ್ತೆಯಲ್ಲಿ ಜರ್ಮನ್ ಟೆಂಟ್ ಮಾದರಿ ಪೆಂಡಾಲ್ ಅಳ ವಡಿಸಿ ದೇಹಗಳನ್ನು ಇರಿಸಲಾಗಿತ್ತು. ಇಂದು ಬೆಳಿಗ್ಗೆ ಚಿಕ್ಕಬಳ್ಳಾಪುರದಿಂದ ಗೋಪಾಲ ಭಟ್ಟಾಚಾರ್ಯ ಹಾಗೂ ಹತ್ತಿರದ ಸಂಬಂಧಿಕರು ಬಂದ ನಂತರ ಸರಳ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಆಂಬುಲೆನ್ಸ್‍ನಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನ ಅನಿಲ ಚಿತಾಗಾರಕ್ಕೆ ಪಾರ್ಥಿವ ಶರೀರಗಳನ್ನು ಕೊಂಡೊಯ್ಯಲಾಯಿತು.

ಮನೆ ಬಳಿ ಓಂಪ್ರಕಾಶ್ ಅವರ ಸಂಬಂಧಿಗಳು, ವೃತ್ತಿಪರರು, ಸ್ನೇಹಿತರು, ದಟ್ಟಗಳ್ಳಿಯ ಜೋಡಿ ಬೇವಿನ ಮರ ಬಳಿಯ ಗ್ರಾವಿಟಿಲೈನ್ ನಿವಾಸಿ ಗಳು ಧಾವಿಸಿ ಪಾರ್ಥಿವ ಶರೀರಗಳ ಅಂತಿಮ ದರ್ಶನ ಪಡೆದು, ಕಂಬನಿ ಮಿಡಿದರು. ಓಂಪ್ರಕಾಶ್ ಹಾಗೂ ನಿಹಾರಿಕ ಅವರ ಸಂಬಂಧಿಕರು ಪಾರ್ಥಿವ ಶರೀರಗಳ ಬಳಿ ರೋದಿಸುತ್ತಿದ್ದ ದೃಶ್ಯ ಮನಕರಗುವಂತಿತ್ತು. ಬಂದವರೆಲ್ಲಾ ಓಂಪ್ರಕಾಶ್ ಒಳ್ಳೆಯ ವ್ಯಕ್ತಿ, ಯಾರಿಗೂ ತೊಂದರೆ ಮಾಡದೆ ತಮ್ಮ ಪಾಡಿಗೆ ತಾವು ಇರು ತ್ತಿದ್ದರು ಎಂದು ಹೇಳುತ್ತಿದ್ದುದು ಸಾಮಾನ್ಯವಾಗಿತ್ತು.