ಹಾಡಹಗಲೇ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: ಐವರ ಬಂಧನ

ಮೈಸೂರು:  ಮೈಸೂರಿನ ಉದಯಗಿರಿಯಲ್ಲಿ ಆರೋಗ್ಯ ಕೇಂದ್ರದ ಸಮೀಪ ಹಾಡಹಗಲೇ ಜೂಜಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿ, ಪಣಕ್ಕಿಟ್ಟಿದ್ದ ಸುಮಾರು 22,550 ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಕ್ಯಾತ ಮಾರನಹಳ್ಳಿ ನಿವಾಸಿಗಳಾದ ಮಹದೇವ (59), ಗೋವಿಂದರಾಜು(53), ಮಾದಪ್ಪ (59), ಶಿವಸ್ವಾಮಿ (60) ಹಾಗೂ ಗಾಯತ್ರಿಪುರಂನ ಅಬ್ದುಲ್ಲಾ ಬಂಧಿತರು.

ಉದಯಗಿರಿ ಟೆಂಟ್ ರಸ್ತೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಖಾಲಿ ಜಾಗದಲ್ಲಿ ಬುಧವಾರ ಹಾಡಹಗಲೇ ಜೂಜಾಟದಲ್ಲಿ ತೊಡಗಿದ್ದರು. ಮಾಹಿತಿ ತಿಳಿದ ಸಿಸಿಬಿ ಹಾಗೂ ಉದಯಗಿರಿ ಠಾಣೆ ಪೊಲೀಸರು ಜಂಟಿ ಕಾರ್ಯಾ ಚರಣೆ ನಡೆಸಿ, ಐವರನ್ನು ಬಂಧಿಸಿ, ಪಣಕ್ಕಿಟ್ಟಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರೆಲ್ಲಾ 50ರಿಂದ 60 ವರ್ಷ ವಯಸ್ಸಿನ ಹಿರಿಯರು ಎಂಬುದು ವಿಷಾದನೀಯ.

ಅಪರಾಧ ವಿಭಾಗದ ಡಿಸಿಪಿ ಡಾ.ವಿಕ್ರಂ ವಿ.ಅಮಟೆ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಪ್ರಭಾರ ಎಸಿಪಿ ಸಿ.ಗೋಪಾಲ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಸಿಬಿ ಇನ್‍ಸ್ಪೆಕ್ಟರ್ ಸಿ.ಕಿರಣ್ ಕುಮಾರ್, ಎಎಸ್‍ಐಗಳಾದ ಚಂದ್ರೇಗೌಡ, ಅಲೆಕ್ಸಾಂಡರ್, ಸಿಬ್ಬಂದಿ ಸಿ.ಚಿಕ್ಕಣ್ಣ, ಎಂ.ಆರ್. ಗಣೇಶ್, ಲಕ್ಷ್ಮೀಕಾಂತ್, ರಾಮಸ್ವಾಮಿ, ಶಿವರಾಜು, ಯಾಕುಬ್ ಷರೀಫ್, ಅಸ್ಗರ್‍ಖಾನ್, ರಾಜೇಂದ್ರ, ನಿರಂಜನ್, ಪ್ರಕಾಶ್, ಆನಂದ್, ಅನಿಲ್, ಗೌತಮ್ ಪಾಲ್ಗೊಂಡಿದ್ದರು.

ಮಟ್ಕಾ ಆರೋಪಿ ಅರೆಸ್ಟ್: ಸಿಸಿಬಿ ಹಾಗೂ ಉದಯಗಿರಿ ಪೊಲೀಸರು ಜಂಟಿ ಕಾರ್ಯಾ ಚರಣೆ ನಡೆಸಿ, ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪಿಯನ್ನು ಮಂಗಳವಾರ ಬಂಧಿಸಿದ್ದಾರೆ. ಮೈಸೂರಿನ ಕೆ.ಎನ್.ಪುರ(ಕ್ಯಾತಮಾರನಹಳ್ಳಿ) ನಿವಾಸಿ ನವೀದ್ ಅಹಮದ್ ಬಂಧಿತನಾಗಿದ್ದು, ಮಟ್ಕಾ ಜೂಜಾಟಕ್ಕೆ ಬಳಸುತ್ತಿದ್ದ ಮೊಬೈಲ್, ಲೆಕ್ಕ ಬರೆದಿರುವ 2 ಚೀಟಿಗಳು ಹಾಗೂ 3,560 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಕೆ.ಎನ್.ಪುರದ ಹರಿಶ್ಚಂದ್ರ ಘಾಟ್ ರಸ್ತೆಯಲ್ಲಿರುವ ಹೋಟೆಲ್‍ವೊಂದರ ಪಕ್ಕದ ಮೆಟ್ಟಿಲುಗಳ ಮೇಲೆ ಕುಳಿತು ಮಟ್ಕಾ ಜೂಜಾಟ ನಡೆಸುತ್ತಿದ್ದ ವೇಳೆ ಹಿರಿಯ ಅಧಿಕಾರಿ ಗಳ ನೇತೃತ್ವದಲ್ಲಿ ಸಿಸಿಬಿ ಇನ್‍ಸ್ಪೆಕ್ಟರ್ ಎ.ಮಲ್ಲೇಶ್, ಎಎಸ್‍ಐ ಆರ್.ರಾಜು, ಸಿಬ್ಬಂದಿ ಜೋಸೆಫ್ ನರ್ಹೋನ, ಡಿ.ಶ್ರೀನಿವಾಸಪ್ರಸಾದ್, ಅರುಣ್‍ಕುಮಾರ್, ನಾಗೇಶ್, ಪುರುಷೋತ್ತವi, ರಘು, ಧನಂಜಯ ಹಾಗೂ ಶ್ರೀನಿವಾಸ್ ತಂಡ ದಾಳಿ ನಡೆಸಿ, ಬಂಧಿಸಿದೆ.