ಮನೆ ಬಾಗಿಲು ಮೀಟಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, 4 ಲಕ್ಷ ನಗದು ಕಳವು

ಮೈಸೂರು: ಮನೆ ಬಾಗಿಲು ಮೀಟಿ ಒಳನುಗ್ಗಿದ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ 4 ಲಕ್ಷ ನಗದು ದೋಚಿರುವ ಘಟನೆ ಮೈಸೂರಿನ ಹೆಬ್ಬಾಳದಿಂದ ವರದಿಯಾಗಿದೆ. ಹೆಬ್ಬಾಳ 3ನೇ ಮುಖ್ಯ ರಸ್ತೆಯ ನಿವಾಸಿ ಪಿ.ಎಸ್. ಜಯಚಂದ್ರ ಎಂಬುವರು ಡಿ.6 ರಂದು ಕುಟುಂಬ ಸಮೇತರಾಗಿ ಬೆಂಗಳೂರಿಗೆ ತೆರಳಿದ್ದರು. ಶನಿವಾರ ವಾಪಸ್ ಬಂದಾಗ ಮನೆ ಬಾಗಿಲು ಅರೆಬರೆ ತೆರೆದಿತ್ತು. ಒಳಗೆ ಹೋಗಿ ನೋಡಿದಾಗ ರೂಂನಲ್ಲಿ ಇಟ್ಟಿದ್ದ 160 ಗ್ರಾಂ ತೂಕದ ಎರಡು ಚಿನ್ನದ ನೆಕ್ಲೇಸ್ ಹಾಗೂ ಬೆಳ್ಳಿ ಪದಾರ್ಥ ಗಳು, ವ್ಯವಹಾರಕ್ಕೆ ಸಂಬಂಧಿಸಿದ ದಾಖಲಾತಿ ಗಳು, ಮತ್ತೊಂದು ರೂಂನಲ್ಲಿದ್ದ 4 ಲಕ್ಷ ನಗದು ಕಳುವಾಗಿರುವುದು ಗೊತ್ತಾಗಿದೆ. ಮನೆಗೆ ನುಗ್ಗಿ ಕಳವು ಮಾಡಿರುವ ಖದೀಮರು, ಸಿಸಿ ಕ್ಯಾಮರಾ ದಲ್ಲಿ ದಾಖಲಾಗಿರುವ ದೃಶ್ಯಗಳು ಪೊಲೀಸರಿಗೆ ಸಿಗಬಾರದು ಎಂಬ ಉದ್ದೇಶದಿಂದ ಸಿಸಿ ಕ್ಯಾಮರಾದ ಡಿವಿಆರ್ ಅನ್ನೂ ಸಹ ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.