ನೇಣು ಬಿಗಿದುಕೊಂಡು ಸರ್ಕಾರಿ ಆಯುರ್ವೇದ ಕಾಲೇಜು ಸಿಬ್ಬಂದಿ ಆತ್ಮಹತ್ಯೆ

ಮೈಸೂರು, ಸೆ. 18(ಆರ್‍ಕೆ)- ನೇಣು ಬಿಗಿದುಕೊಂಡು ಸರ್ಕಾರಿ ಆಯುರ್ವೇದ ಕಾಲೇಜು ಮಹಿಳಾ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ಮೈಸೂರಿನ ಶ್ರೀರಾಂಪುರದಲ್ಲಿ ಸಂಭವಿಸಿದೆ. ಶ್ರೀರಾಂಪುರ ನಿವಾಸಿ ಲೇಟ್ ಮಂಜು ನಾಥ್ ಅವರ ಪತ್ನಿ ಶ್ರೀಮತಿ ಲಕ್ಷ್ಮಿ(28) ನೇಣಿಗೆ ಶರಣಾದವರು. ಮೈಸೂರಿನ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ‘ಡಿ’ ಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿದ್ದ ಪತಿ ಮಂಜುನಾಥ್ ಅವರು ಸಾವನ್ನಪ್ಪಿದ ನಂತರ ಅನುಕಂಪದ ಆಧಾರದಲ್ಲಿ ಪತ್ನಿ ಲಕ್ಷ್ಮಿ ಅವರಿಗೆ ದ್ವಿತೀಯ ದರ್ಜೆ ಗುಮಾಸ್ತೆಯನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು.

ಇಂದು ಬೆಳಿಗ್ಗೆ ಮನೆಯಲ್ಲಿ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕುವೆಂಪುನಗರ ಠಾಣೆ ಇನ್ಸ್‍ಪೆಕ್ಟರ್ ರಾಜು ಹಾಗೂ ಸಿಬ್ಬಂದಿ, ಮಹಜರು ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಹಣಕಾಸು ವ್ಯವಹಾರದಲ್ಲಿ ಸಾಕಷ್ಟು ನಷ್ಟ ಉಂಟಾಗಿತ್ತು ಎಂದು ಹೇಳಲಾಗಿದ್ದು, ಆ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.