ಗುಂಡ್ಲುಪೇಟೆಯಲ್ಲಿ ಹನುಮ ಜಯಂತಿ

ಗುಂಡ್ಲುಪೇಟೆ, ಡಿ.9(ಸೋಮ್.ಜಿ)- ಪಟ್ಟಣದ ಜೋಡಿ ರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆ ಯಿಂದ ಆಚರಣೆ ಮಾಡಲಾಯಿತು.

ಹನುಮ ಜಯಂತಿ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ವಿಶೇಷವಾದ ಹೂವಿನ ಅಲಂಕಾರಗಳೊಂದಿಗೆ ತಳಿರು ತೋರಣ ಸೇರಿದಂತೆ ವಿದ್ಯುತ್ ದೀಪಾಲಂಕಾರ ಗಳಿಂದ ಸಿಂಗಾರಗೊಳಿಸಲಾಗಿತ್ತು.

ಸಂಜೀವಿನಿ ಪರ್ವತವನ್ನು ಕೈಯಲ್ಲಿ ಎತ್ತು ನಿಂತ ಭಂಗಿಯಲ್ಲಿರುವ ಕಲ್ಲಿನ ಮೂರ್ತಿಗೆ ವಿವಿಧ ಪುಷ್ಪಗಳಿಂದ ಅಲಂ ಕಾರಗೊಳಿಸಿ ವಿಶೇಷ ಪೂಜಾ ಕೈಂಕರ್ಯ ಗಳನ್ನು ನಡೆಸಲಾಯಿತು. ಪುರಸಭಾ ಮಾಜಿ ಅಧ್ಯಕ್ಷ ಎಂ.ಪುಟ್ಟರಂಗನಾಯಕ್ ಮತ್ತು ಕುಟುಂಬದವರು ಭಕ್ತಾದಿಗಳಿಗಾಗಿ ಅನ್ನಸಂತ ರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್. ನಿರಂಜನಕುಮಾರ್, ಬಿಜೆಪಿ ಮುಖಂಡ ಎನ್.ಮಲ್ಲೇಶ್, ಪಿ.ಗಿರೀಶ್, ನಂಜುಂಡ ಸ್ವಾಮಿ (ಮಾಲಿ), ನಾರಾಯಣಸ್ವಾಮಿ ಸೇರಿದಂತೆ ಸಾವಿರಾರು ಭಕ್ತರು ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದು ಪುನೀತರಾದರು.

ಈ ಜಯಂತಿ ಮಹೋತ್ಸವಕ್ಕೆ ಪಟ್ಟಣ ಮತ್ತು ತಾಲೂಕಿನ ಗಣ್ಯರು, ವಿವಿಧ ಪಕ್ಷಗಳ ಮುಖಂಡರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.