ಕೊಡಗಿನ ಸಂತ್ರಸ್ತರಿಗೆ ಹೋಟೆಲ್ ಸಿಬ್ಬಂದಿ ನೆರವು

ಅರಸೀಕೆರೆ: ಕೊಡಗು ನೆರೆ ಸಂತ್ರಸ್ತರಿಗೆ ಪಟ್ಟಣದ ಸ್ಥಳೀಯ ಹೋಟೆಲ್ ಸಿಬ್ಬಂದಿ ತಮ್ಮ ಒಂದು ದಿನ ವೇತನವನ್ನು ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನಗರದ ಹೊರ ಹೊಲಯದಲ್ಲಿರುವ ಪುಷ್ಕರ ವೆಜ್ ಹೋಟೆಲ್ ಮಾಲಿಕ ಸುದರ್ಶನ್ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಅಲ್ಲಿಯ ಜನತೆ ಸಂತ್ರಸ್ತರಾಗಿದ್ದಾರೆ. ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಅನೇಕ ದಾನಿಗಳು ತಮ್ಮ ಶಕ್ತಿಯಾನುಸಾರ ವಿವಿಧ ರೂಪದಲ್ಲಿ ಸಹಾಯ ಹಸ್ತವನ್ನು ನೀಡುತ್ತಿದ್ದಾರೆ. ಈ ದಿನ ನಮ್ಮ ಹೋಟೆಲ್‍ನಲ್ಲಿ ಆದಂತಹ ಒಟ್ಟು ವ್ಯವಹಾರದ ಲಾಭದಲ್ಲಿ ಶೇ. 25ರಷ್ಟು ಲಾಭದ ಹಣವನ್ನು ಈಗಾಗಲೇ ನಮ್ಮ ಸಿಬ್ಬಂದಿ ವೈಯಕ್ತಿಕವಾಗಿ ಸಂಗ್ರಹಿಸಿ 7,500ರೂ.ನೊಂದಿಗೆ ಸೇರಿಸಿ ನೆರೆ ಸಂತ್ರಸ್ತರಿಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ಸುಸನ್ನ ಕುಮಾರ್ ಇದ್ದರು.