ಹಾಡಹಗಲೇ ಮನೆಗಳ್ಳತನ: ನಗನಾಣ್ಯ ಅಪಹರಣ

ಕೆ.ಆರ್.ಪೇಟೆ: ಹಾಡಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಅಘಲಯ ಸಮೀಪದ ನಾಯಸಿಂಗನಹಳ್ಳಿ ಗ್ರಾಮದಲ್ಲಿ ಸೋಮ ವಾರ ಮಧ್ಯಾಹ್ನ ನಡೆದಿದೆ. ಗ್ರಾಮದ ದಿನೇಶ್ ಅವರ ಮನೆಯಲ್ಲೇ ಕಳ್ಳತನ ನಡೆದಿರುವುದು.

ಘಟನೆ ವಿವರ: ನಾಯಸಿಂಗನಹಳ್ಳಿ ಗ್ರಾಮದ ದಿನೇಶ್ ದಂಪತಿ ಮನೆಗೆ ಬೀಗ ಹಾಕಿಕೊಂಡು ಕೂಲಿಗೆ ಹೋಗಿದ್ದರು. ಇದನ್ನು ಗಮಸಿರುವ ದುಷ್ಕರ್ಮಿಗಳು ಮನೆಯ ಬೀಗ ಮುರಿದು ಒಳನುಗ್ಗಿ ಕಬ್ಬಿಣದ ರಾಡಿನಿಂದ ಬೀರು ಬಾಗಿಲು ಮುರಿದು ಬೀರುವಿನಲ್ಲಿದ್ದ 2 ಉಂಗುರ, 1 ಸರ, ಓಲೆ ಸೇರಿದಂತೆ 1ಲಕ್ಷ ರೂ.ಮೌಲ್ಯದ 30ಗ್ರಾಂ ತೂಕದ ವಿವಿಧ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ವಿಷಯ ತಿಳಿಯು ತ್ತಿದ್ದಂತೆಯೇ ಎಸ್‍ಐ ಹೆಚ್.ಎಸ್.ವೆಂಕಟೇಶ್, ಸಂತೇಬಾಚಹಳ್ಳಿ ಹೊರಠಾಣೆ ದಫೇದಾರ್ ಗೋವಿಂದಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಸ್.ಶ್ರೀಧರ್, ಗ್ರಾಪಂ ಅಧ್ಯಕ್ಷೆ ಭಾರತಿ ಸ್ಥಳ ಪರಿಶೀಲಿಸಿದರು. ಕೆ.ಆರ್.ಪೇಟೆ ಪಟ್ಟಣ ಪೊಲೀಸರು ಮನೆಯ ಮಾಲೀಕ ದಿನೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.