ಹಿಂದೂಪರ ಸಂಘಟನೆಗಳಿಂದ ಬೃಹತ್ ಬೈಕ್ ಜಾಥಾ: ಕ್ರಿಶ್ಚಿಯನ್ ಮಿಷನರಿಗಳಿಂದ ಮತಾಂತರ ಆರೋಪ

ಮದ್ದೂರು, ಡಿ.18- ಪಟ್ಟಣ ಹಾಗೂ ತಾಲೂಕಿನ ಹಲವು ಭಾಗ ಗಳಲ್ಲಿ ಹಿಂದೂಗಳನ್ನು ಕ್ರಿಶ್ಚಿಯನ್ ಮಿಷನರಿಗಳು ಬಲವಂತವಾಗಿ ಆಸೆ, ಆಮಿಷಗಳನ್ನು ಒಡ್ಡುವ ಮೂಲಕ ಕ್ರಿಶ್ಚಿಯನ್ ಮತಕ್ಕೆ ಮತಾಂ ತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದಲ್ಲಿ ಬುಧವಾರ ಹಿಂದೂಪರ ಸಂಘಟನೆಗಳಿಂದ ಬೃಹತ್ ಬೈಕ್ ಜಾಥಾ ನಡೆಯಿತು.

ಶಿವಪುರ ಇತಿಹಾಸ ಪ್ರಸಿದ್ಧ ಧ್ವಜ ಸತ್ಯಾಗ್ರಹ ಸೌಧದಿಂದ ವಿವಿಧ ಹಿಂದೂ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಬೈಕ್ ಜಾಥದ ಮೂಲಕ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡಿ, ಪ್ರವಾಸಿ ಮಂದಿರದ ಬಳಿ ಜಮಾವಣೆಗೊಂಡು ಕೆಲಕಾಲ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನಂತರ ಪಟ್ಟಣ ಪೊಲೀಸ್ ಠಾಣೆಗೆ ಆಗಮಿಸಿ ಮತಾಂತರ ತಡೆ ಗಟ್ಟಲು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾ ಯಿಸಿ ಮನವಿ ಪತ್ರ ನೀಡಿದರು. ಬೈಕ್ ಜಾಥಕ್ಕೆ ಚಾಲನೆ ನೀಡಿದ ನಿವೃತ್ತ ಎಎಸ್‍ಪಿ ಬಲರಾಮೇಗೌಡ ಮಾತನಾಡಿ, ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಕ್ರೈಸ್ತ ಮಿಷನರಿಗಳು ಶೋಷಿತ ವರ್ಗದವರನ್ನು ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನು ಹಣ ಹಾಗೂ ಇನ್ನಿತರರ ಆಮಿಷಗಳನ್ನು ಒಡ್ಡುವ ಮೂಲಕ ಕ್ರಿಶ್ಚಿಯನ್ ಧರ್ಮಕ್ಕೆ ಮಂತಾತರ ಮಾಡುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಈ ಬಗ್ಗೆ ಹಿಂದೂಗಳು, ಮಠಾಧೀಶರು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆಂದು ಆತಂಕ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆ ದಕ್ಷಿಣ ಪ್ರಾಂತ ಕಾರ್ಯದರ್ಶಿ ಉಲ್ಲಾಸ್, ಪುರಸಭೆ ಸದಸ್ಯೆ ಪ್ರಿಯಾಂಕ, ಮಾಜಿ ಸೈನಿಕ ಶ್ರೀನಿವಾಸ್, ಮುಖಂಡರಾದ ನೈದಿಲೆ ಚಂದ್ರು, ಅಪ್ಪುಗೌಡ, ಮ.ನ.ಪ್ರಸನ್ನಕುಮಾರ್, ಮೃತ್ಯುಂಜಯ, ಯೋಗಾನಂದ್, ಬಾಲು, ಎಂ.ಸಿ.ಸಿದ್ದು, ವೀರಭದ್ರಸ್ವಾಮಿ, ಗುರುಮಲ್ಲೇಶ್, ಶ್ರೀನಿವಾಸ ಶೆಟ್ಟಿ, ಮಲ್ಲಿಕಾ, ಜಗನ್ನಾಥ್, ಅಭಿ, ಅಶೋಕ್ ಇತರರು ಪಾಲ್ಗೊಂಡಿದ್ದರು.