ನನ್ನ ದಾರಿ ಸುಗಮವಾಗಿಲ್ಲ ಎಂಬುದರ ಅರಿವಿದೆ: ಸುಮಲತಾ

ನಾಮಪತ್ರ ಸಲ್ಲಿಕೆಗೂ ಮುನ್ನಾದಿನ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರ
ಮಂಡ್ಯ,: ಜಿಲ್ಲೆಯ ಜನರನ್ನು ಉದ್ದೇಶಿಸಿ ಪಕ್ಷೇತರ ಅಭ್ಯರ್ಥಿ ನಟಿ ಸುಮ ಲತಾ ಅಂಬರೀಷ್ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರ ಬರೆದಿದ್ದು, ಮಂಗಳವಾರ ವೈರಲ್ ಆಗಿದೆ.

`ಮಂಡ್ಯದ ಜನತೆಯಲ್ಲಿ ನನ್ನ ಮನ ದಾಳದ ಒಂದು ಮಾತು ಹಂಚಿಕೊಳ್ಳಲು ಬಯಸುತ್ತೇನೆ. ಅಂಬರೀಷ್ ನಮ್ಮೆಲ್ಲರನ್ನು ಅಗಲಿ ಹೋದ ದಿನಗಳಿಂದ ನನ್ನ ಜೀವನದಲ್ಲಿ ಬಿರು ಗಾಳಿ ಎಬ್ಬಿಸಿ ಕತ್ತಲಿನೆಡೆಗೆ ತಳ್ಳಿತ್ತು. ಇಂತಹ ಸಂದರ್ಭ ದಲ್ಲಿ ಜನರ ಶಕ್ತಿ ಮತ್ತು ಪ್ರೀತಿ ಕತ್ತಲಿನಿಂದ ಹೊರಬರಲು ಪ್ರೇರೇಪಿಸಿತು. ನಿಮ್ಮ ಕಷ್ಟ ಹಂಚಿಕೊಳ್ಳಲು ನಾವಿದ್ದೇವೆ ಎಂದು ಜನರೇ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಆತ್ಮವಿಶ್ವಾಸ, ಪ್ರೀತಿ ಇವೆಲ್ಲವೂ ನನ್ನನ್ನು ಅನಿವಾರ್ಯವಾಗಿ ಹೊಸ ದಾರಿಯತ್ತ ಹೊಸ ಗುರಿಯತ್ತ ಪ್ರೇರೇಪಿಸಿದೆ. ಅಂಬರೀಷ್ ಜೀವನದುದ್ದಕೂ ಜತೆಗಿದ್ದ ಜನರಿಗಾಗಿ ದುಡಿಯಲು ನನ್ನ ಜೀವನ ಸವೆಸಲು ನಿರ್ಧರಿಸಿದ್ದೇನೆ. ನನ್ನ ದಾರಿಯೂ ಸುಗಮ ವಾಗಿರುವುದಿಲ್ಲ ಎಂದು ನನಗೆ ಚೆನ್ನಾಗಿ ಅರಿವಿದೆ. ಆ ದಾರಿಯಲ್ಲಿ ಕಲ್ಲುಮುಳ್ಳುಗಳ ಅಡೆತಡೆಗಳು ಮತ್ತು ಪ್ರಶ್ನೆಗಳು ಹುಟ್ಟುವ ಸಾಧ್ಯತೆ ಇದೆ. ಎಲ್ಲ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ ತಯಾರಿದ್ದೇನೆ. ಈ ನಿರ್ಧಾರಕ್ಕೆ ನಿಮ್ಮ ಆಶೀರ್ವಾದ, ಅಭೂತಪೂರ್ವ ಬೆಂಬಲ ನನಗೆ ಅಗತ್ಯ. ನನ್ನ ಈ ನಿರ್ಧಾರ ಯಾರ ವಿರುದ್ಧವೂ ಅಲ್ಲ ಅಥವಾ ಸವಾಲು ಎಸೆಯಲು ಖಂಡಿತವಾಗಿಯೂ ಅಲ್ಲ. ಮಂಡ್ಯ ಜನರ ಪ್ರೀತಿ, ವಿಶ್ವಾಸಗಳು ನನ್ನನ್ನು ಸದಾ ಕಾಪಾಡುತ್ತದೆ ಎಂದು ನಂಬಿದ್ದೇನೆ’ ಎಂದು ಬರೆದಿದ್ದಾರೆ.