ವಿಶ್ವನಾಥರ ಸಲಹೆ-ಸೂಚನೆಯಲ್ಲಿ ಸತ್ಯಾಂಶವಿದ್ದರೆ ಸರಿಪಡಿಸಿಕೊಳ್ಳುತ್ತೇನೆ

ಮಡಿಕೇರಿ: ಜೆಡಿಎಸ್ ಪಕ್ಷ ಎಲ್ಲರನ್ನೂ ಪ್ರೀತಿ-ವಿಶ್ವಾಸದಿಂದ ಕಾಣುವ ಪಕ್ಷ, ವಿಶ್ವನಾಥ್ ಅವರೇ ನಮ್ಮ ರಾಜ್ಯಾಧ್ಯಕ್ಷರು, ಅವರನ್ನೇ ಒಪ್ಪಿಕೊಂಡ ಮೇಲೆ ಅವರ ಸಲಹೆಗಳನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಹೇಳುವ ಮೂಲಕ ರಾಜ್ಯ ಪ್ರವಾಸೋದ್ಯಮ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಕರ್ಣಂಗೇರಿ ಗ್ರಾಮದಲ್ಲಿ ಸಂತ್ರಸ್ತರಿಗೆ ನಿರ್ಮಿಸುತ್ತಿರುವ ಮನೆಗಳನ್ನು ಪರಿಶೀಲಿಸಿದ ಬಳಿಕ ವಿಶ್ವನಾಥ್ ಅವರು ಮಾಡಿರುವ ಆರೋಪಗಳ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವ ಸಾ.ರಾ.ಮಹೇಶ್, ಹೆಚ್.ವಿಶ್ವನಾಥ್ ಅನುಭವದ ಮೇಲೆ ಎಲ್ಲವನ್ನೂ ಹೇಳಿದ್ದಾರೆ. ಅವರು 40 ವರ್ಷದಿಂದ ರಾಜಕಾರಣದಲ್ಲಿದ್ದಾರೆ. ನನಗೆ ಕೇವಲ 20 ವರ್ಷದ ರಾಜಕೀಯ ಅನುಭವ ಇದೆ ಅಷ್ಟೇ. ನಮ್ಮಂತಹವರಿಗೆ ಸಲಹೆ ಕೊಡುವ ಸಂಪೂರ್ಣ ಹಕ್ಕು ಅವರಿಗಿದೆ. ಅವರ ಸಲಹೆ, ಸೂಚನೆಯಲ್ಲಿ ಸತ್ಯಾಂಶವಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತೇನೆ ಎಂದು ಹೇಳಿದರು. ನನ್ನನ್ನು ಕೆ.ಆರ್. ನಗರದ ಜನರು 1840 ಓಟಲ್ಲಿ ಮೂರನೇ ಬಾರಿಗೆ ಗೆಲ್ಲಿಸಿದ್ದಾರೆ. ನಾನು ಯಾವುದನ್ನೂ ಮರೆತಿಲ್ಲ. ಹಾಗಾಗಿಯೇ ಸೀಗೋಡಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೇನೆ. ಇಂದು ಮಡಿಕೇರಿಗೆ ಭೇಟಿ ನೀಡಿ ಮನೆ ನಿರ್ಮಾಣ ಕಾರ್ಯ ವೀಕ್ಷಣೆ ಮಾಡುತ್ತಿದ್ದೇನೆ ಎಂದು ಹೆಚ್.ವಿಶ್ವನಾಥ್‍ಗೆ ಪರೋಕ್ಷ ಟಾಂಗ್ ನೀಡಿದರು. ಈ ಭಾರಿಯ ಪುರಸಭೆ ಚುನಾವಣೆಯಲ್ಲಿ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. 2018ರ ಚುನಾವಣೆಯಲ್ಲಿ ಕೆ.ಆರ್.ನಗರ ಟೌನ್‍ನಲ್ಲಿ 2000 ಓಟುಗಳ ಡಿಫರೆನ್ಸ್ ಇತ್ತು. ಈ ಬಾರಿಯ ಎಲೆಕ್ಷನ್‍ನಲ್ಲಿ 516 ಓಟು ಮಾತ್ರ ಡಿಫರೆನ್ಸ್ ಇದೆ. ಅದನ್ನು ಹೇಗೆ ಸರಿ ಮಾಡಿಕೊಳ್ಳಬೇಕು ಅನ್ನೋದನ್ನು ವಿಶ್ವನಾಥ್ ಅವರ ಸಲಹೆ ಸ್ವೀಕರಿಸಿ ಸರಿ ಮಾಡ್ಕೋತ್ತೀನಿ. ನಾನು ಯಾವತ್ತೂ ದ್ವೇಷದ ರಾಜಕಾರಣ ಮಾಡಿಲ್ಲ, ಮಾಡೋದು ಇಲ್ಲ ಎಂದು ಅವರು ಹೇಳಿದರು.