ಮೈತ್ರಿ ಸರ್ಕಾರ ಉರುಳಿದರೆ ಅದಕ್ಕೆ ರೇವಣ್ಣ ಕಾರಣ

ಹಾಸನ:  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿದರೆ ಅದಕ್ಕೆ ನಿಮ್ಮ ಅಣ್ಣನೇ ಕಾರಣ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವ ಎ.ಮಂಜು ಎಚ್ಚರಿಸಿದ್ದಾರೆ.

ಸಕಲೇಶಪುರದ ಬಿಸಿಲೆ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಬಲಹೀನವಾಗುತ್ತಿದೆ. ಅದಕ್ಕೆ ಜೆಡಿಎಸ್ ದ್ವೇಷದ ರಾಜಕಾರಣವೇ ಕಾರಣ. ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿ ಅವರಿಗೆ ಬಹಿರಂಗ ಎಚ್ಚರಿಕೆ ಕೊಡುತ್ತಿದ್ದೇನೆ. ಹೆಚ್.ಡಿ.ರೇವಣ್ಣ ಅವರಿಗೆ ಕಿವಿಮಾತು ಹೇಳಬೇಕು. ನಾವು ಇನ್ನೂ ದ್ವೇಷದ ರಾಜಕಾರಣ ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಶುರುವಾಗಿದೆ. ಹೀಗಾದರೆ ಕಾಂಗ್ರೆಸ್ ಕಾರ್ಯಕರ್ತರ ಗತಿಯೇನು ಎಂದು ಪ್ರಶ್ನಿಸಿ ದರಲ್ಲದೆ, ಮೈತ್ರಿ ಸರ್ಕಾರ ಉರುಳಿದರೆ ಅದಕ್ಕೆ ಹೆಚ್.ಡಿ.ರೇವಣ್ಣ ಅವರೇ ಕಾರಣರಾಗುತ್ತಾರೆ ಎಂದು ಸಿಡಿಮಿಡಿಗೊಂಡರು.