ಅಕ್ರಮ ಸಾಗಣೆ: ಇಬ್ಬರ ಬಂಧನ, 11 ಜಾನುವಾರಗಳ ರಕ್ಷಣೆ

ಅರಸೀಕೆರೆ: ತಾಲೂಕಿನ ಕೆರೆಕೋಡಿಹಳ್ಳಿ ಬಳಿ ಟಾಟಾ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ರಕ್ಷಿಸಿದ ಕಸಬಾ ಗ್ರಾಮಾಂತರ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೆಂಗಳೂರು ಮೂಲದ ಹಳೇಗುಡ್ಡದಹಳ್ಳಿಯ ಯೂಸೋಫ್ ಖಾನ್(32), ಆಲೀಫ್ ಖಾನ್(55) ಬಂಧಿತರು. ಈ ಇಬ್ಬರು ಸೋಮವಾರ ರಾತ್ರಿ 10.30ರಲ್ಲಿ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ವಾರದ ಸಂತೆಯಲ್ಲಿ ಹಸು-ಕರುಗಳು ಸೇರಿದಂತೆ ಒಟ್ಟು 11 ಜಾನುವಾರುಗಳನ್ನು ಖರೀದಿಸಿ ಬೆಂಗಳೂರಿಗೆ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಸಬಾ ಗ್ರಾಮಾಂತರ ಪೊಲೀಸ್ ಠಾಣೆ ಎಎಸ್‍ಐ ಗಂಗಾಧರ್, ಸಿಬ್ಬಂದಿಯೊಂದಿಗೆ ತೆರಳಿ ತಾಲೂಕಿನ ಕೆರೆಕೋಡಿಹಳ್ಳಿ ಬಳಿ ವಾಹನ ತಡೆದು ಪರಿಶೀಲನೆ ನಡೆಸಿದಾಗ ಪರವಾನಗಿ ಇಲ್ಲದಿರುವುದು ದೃಢಪಟ್ಟಿದೆ. ತಕ್ಷಣ ಜಾನುವಾರುಗಳನ್ನು ರಕ್ಷಿಸಿ, ಇಬ್ಬರ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಮೈಸೂರಿನ ಪಿಂಜ್ರಾಪೋಲ್ ಗೋಶಾಲೆಗೆ ಕಳುಹಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.