ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡ ಭೂಪ ಅಕ್ರಮಕ್ಕೆ ಅಧಿಕಾರಿಗಳ ಸಾಥ್ ಶಂಕೆ

ಮೈಸೂರು: ಪರಿಶಿಷ್ಟ ಜಾತಿಯ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ವ್ಯಕ್ತಿಯೋರ್ವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಉದ್ಯೋಗ ಪಡೆದಿರುವ ಬಗ್ಗೆ ದೂರು ದಾಖಲಾಗಿದೆ. ಬೆಲವತ್ತ ಗ್ರಾಮ ಪಂಚಾಯಿತಿಯಲ್ಲಿ ವಾಟರ್‍ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ವಿ.ಮಂಜುನಾಥ್, ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಉದ್ಯೋಗ ಪಡೆದ ಆರೋಪ ಎದುರಿಸುತ್ತಿದ್ದಾರೆ. ಕಳೆದ ಸುಮಾರು 7 ವರ್ಷಗಳಿಂದ ಬೆಲವತ್ತ ಗ್ರಾಮದಲ್ಲಿ ವಾಸವಿರುವ ಈತ ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದು, ಅವರು ಶಾಲೆ ದಾಖಲಾತಿ ಮತ್ತು ಮಂಡ್ಯ ತಹಸೀಲ್ದಾರರು ಇವರಿಗೆ ನೀಡಿರುವ ಜಾತಿ ಪ್ರಮಾಣ ಪತ್ರದಲ್ಲಿ ಇವರನ್ನು ‘ಬಣಜಿಗ’ ಎಂದು ನಮೂದಿಸಲಾಗಿದೆ. ಆದರೆ, ಇವರು ಪರಿಶಿಷ್ಟ ಜಾತಿಗೆ ಸೇರಿದ ಬೋವಿ ಜನಾಂಗದವರೆಂದು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡು, ಬೆಲವತ್ತ ಗ್ರಾಪಂನ ವಾಟರ್‍ಮನ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಬೆಲವತ್ತ ಗ್ರಾಮದ ಶಿವಕುಮಾರ್ ಎಂಬುವರು ಮೈಸೂರು ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಜಾರಿ ನಿರ್ದೇಶ ನಾಲಯದ ಮೈಸೂರು ಜಿಲ್ಲಾ ಎಸ್ಪಿ ಅವರಿಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ.