ಕುಕ್ಕರಹಳ್ಳಿ ಕೆರೆ, ಅಲ್ಲಿರುವ ಜೀವ ವೈವಿಧ್ಯತೆ ರಕ್ಷಣೆಗೆ ಮೈಗ್ರಾಪದ ಹತ್ತು ಹಲವು ಉಪಯುಕ್ತ ಸಲಹೆ

ಮೈಸೂರು: ಮೈಸೂರಿನ ಕುಕ್ಕರಹಳ್ಳಿ ಕೆರೆ ಸಂರ ಕ್ಷಣೆ ಪ್ರತಿಯೊಬ್ಬ ನಾಗರಿಕರ ಹೊಣೆಯಾಗಿದೆ. ಈ ಹಿನ್ನೆಲೆ ಯಲ್ಲಿ ಮೈಸೂರು ಗ್ರಾಹಕರ ಪರಿಷತ್ ಪರವಾಗಿ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ಶೋಭನ ಅವರು, ಕುಕ್ಕರಹಳ್ಳಿ ಕೆರೆ ಪ್ರದೇಶದಲ್ಲಿ ಕಂಡ ಸಮಸ್ಯೆಗಳ ಜೊತೆಗೆ ಕೈಗೊಳ್ಳಬಹು ದಾದ ಒಂದಷ್ಟು ಪರಿಹಾರ ಕ್ರಮಗಳನ್ನು ಸೂಚಿಸಿದ್ದಾರೆ.

  • ಕೆರೆ ಸೇರಿದಂತೆ ಸುತ್ತಲಿನ ಮಾನಸಗಂಗೋತ್ರಿ, ಸಿಎಫ್‍ಟಿಆರ್‍ಐ, ಜಿಲ್ಲಾಧಿಕಾರಿಗಳ ನಿವಾಸ ಹೀಗೆ ಸಂರಕ್ಷಿತ ವನ್ಯ ಪ್ರದೇಶಗಳಲ್ಲಿರುವ ಗುಳ್ಳೇನರಿ, ಪುನುಗು ಬೆಕ್ಕು, ಮೊಲ ಇನ್ನಿತರ ಪ್ರಾಣಿಗಳು ಆಹಾರಕ್ಕಾಗಿ ರಾತ್ರಿ ವೇಳೆ ಹೆಚ್ಚಾಗಿ ಸಂಚರಿಸುತ್ತವೆ. ಇತ್ತೀಚೆಗೆ 2 ಗುಳ್ಳೇನರಿಗಳು ವಾಹನಗಳಿಗೆ ಸಿಕ್ಕಿ ಸಾವನ್ನಪ್ಪಿವೆ. ಹಾಗಾಗಿ ಕೆರೆಯ ಸುತ್ತಲಿನ ರಸ್ತೆಗಳಲ್ಲಿ ವೇಗ ಮಿತಿ ಕಡ್ಡಾಯಗೊಳಿಸಿ, ವನ್ಯಜೀವಿಗಳ ಚಿತ್ರವುಳ್ಳ ಸೂಚನಾ ಫಲಕ, ಸಿಸಿ ಟಿವಿ ಕ್ಯಾಮರಾ ಅಳವಡಿಸಬೇಕು. ಇದ ರಿಂದ ವನ್ಯಜೀವಿಗಳ ಪ್ರಾಣ ರಕ್ಷಣೆಯ ಜೊತೆಗೆ ಮರಗಳ್ಳತನ, ಅನೈತಿಕ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಬಹುದು. ಪೊಲೀ ಸರು, ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮತ್ತಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು.
  •  ಕೆರೆ ಸಮೀಪದಲ್ಲಿ ಮೀನು ಮಾರಾಟ ಕೇಂದ್ರ ಆರಂಭ ವಾದಾಗಿನಿಂದ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಪಕ್ಷಿ ಗಳನ್ನು ಬೇಟೆಯಾಡಿರುವ ಉದಾಹರಣೆಯೂ ಇವೆ. ಆಗಾಗ ಬಿಡಾಡಿ ದನಗಳೂ ಕೆರೆ ಪ್ರದೇಶದಲ್ಲಿ ಕಾಣ ಸಿಗುತ್ತವೆ. ಅನಧಿಕೃತವಾಗಿ ಹುಲ್ಲು ಕೊಯ್ಯುವವರು, ಸೌದೆ ಸಂಗ್ರಹಿಸುವವರಿಂದಲೂ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕೆರೆ ಸುತ್ತಲೂ ಎತ್ತರದ ಬೇಲಿ ನಿರ್ಮಿಸಿ, ತಳ ಭಾಗದಲ್ಲಿ ವನ್ಯಜೀವಿ ಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಬೀದಿ ನಾಯಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜ ನಿಕರು ಆಹಾರ ಪದಾರ್ಥಗಳನ್ನು ಕೆರೆ ಆವರಣಕ್ಕೆ ತರದಂತೆ ನಿರ್ಬಂಧಿಸಿ, ಜಾಗೃತಿ ಮೂಡಿಸಬೇಕು.
  •  ಇಲ್ಲಿರುವ 4 ಪ್ರವೇಶ ದ್ವಾರಗಳಿಗೆ ಸೂಕ್ತ ತರಬೇತಿ ಹೊಂದಿರುವ, ಪರಿಸರ, ಪ್ರಾಣಿ, ಪಕ್ಷಿಗಳ ಬಗ್ಗೆ ಕಾಳಜಿ ಯುಳ್ಳ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಕಾವಲುಗಾರರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಬೇಕು.
  • ಮಾನಸಗಂಗೋತ್ರಿ ಕ್ಯಾಂಪಸ್ ರಸ್ತೆಯಲ್ಲಿರುವ ಕಚೇರಿಗಳನ್ನು ಹಂತ ಹಂತವಾಗಿ ಬೇರೆ ಸ್ಥಳಗಳಿಗೆ ಸ್ಥಳಾಂತರಿಸಿ, ಸಸ್ಯವನ ನಿರ್ಮಿಸಬೇಕು. ವಾಯು ವಿಹಾರಕ್ಕೆ ಸಮಯ ನಿಗದಿ ಮಾಡಿ, ಪ್ರಾಣಿ, ಪಕ್ಷಿ ಗಳಿಗಾಗುವ ಕಿರಿಕಿರಿ ತಪ್ಪಿಸಬೇಕು.
  • ರಂಗಾಯಣ ಮತ್ತು ಕಲಾಮಂದಿರದಲ್ಲಿ ನಾಟಕಕ್ಕೆ ಬಳಸುವ ರಾಸಾಯನಿಕಗಳು, ಪ್ಲಾಸ್ಟಿಕ್, ಥರ್ಮಕೊಲ್, ಬಾಟಲಿಗಳು, ಪ್ಲಾಸ್ಟಿಕ್ ತಟ್ಟೆ, ಲೋಟಗಳು ಇನ್ನಿತರ ತ್ಯಾಜ್ಯಗಳನ್ನು ಕೆರೆಯ ಬದಿಗೆ ಬಿಸಾಡುವುದರಿಂದ ನೀರು ಕಲುಷಿತವಾಗುವುದಲ್ಲದೆ, ಜೀವ ಸಂಕುಲಕ್ಕೂ ಅಪಾಯ ಕಾರಿಯಾಗಿದೆ. ರಾತ್ರಿ ವೇಳೆ ತೀಕ್ಷ್ಣ ಬೆಳಕು ಹಾಗೂ ಅಬ್ಬರದ ಧ್ವನಿವರ್ಧಕಕ್ಕೆ ಬ್ರೇಕ್ ಹಾಕಬೇಕು.
  • ಕೆರೆಯ ಎಂಟು ಮುಖ್ಯ ಮಳೆನೀರಿನ ಒಳ ಹರಿವುಗಳ ಹಾಗೂ ಅದರ ಕ್ಯಾಚ್ಮೆಂಟ್ ಸ್ಥಳಗಳನ್ನು ಪರಿಶೀಲಿಸಿ, ಪ್ಲಾಸ್ಟಿಕ್, ಇನ್ನಿತರ ಕಲ್ಮಶಗಳು ಕೆರೆಗೆ ಸೇರದಂತೆ ಕ್ರಮ ಕೈಗೊಳ್ಳ ಬೇಕು. ಮುಖ್ಯವಾಗಿ ಪೂರ್ಣಯ್ಯ ಕಾಲುವೆ, ಉತ್ತರÀ ಭಾಗದ ಕಾಲುವೆ ಹಾಗೂ ವಾಣಿ ವಿಲಾಸ ಕುಡಿಯುವ ನೀರು ಸಂಗ್ರಹಗಾರದಿಂದ ಬರುವ ಬ್ಯಾಕ್ ವಾಶ್ ನೀರು, ಹರಿವಿನ ಬಗ್ಗೆ ನಿಗಾ ವಹಿಸಿ, ಕಾಲುವೆ ಒತ್ತುವರಿ ತೆರವು ಮಾಡಿಸಬೇಕು. ಮಳೆ ನೀರಿನೊಂದಿಗೆ ತ್ಯಾಜ್ಯ ವಸ್ತುಗಳು ಕೆರೆ ಸೇರದಂತೆ ನೋಡಿಕೊಳ್ಳಬೇಕು. ಬ್ಯಾಕ್ ವಾಶ್ ನೀರು ಹರಿದು ಬರುವ ಪೈಪ್‍ಗಳ ದುರಸ್ತಿಯಾಗಬೇಕು.
  •  ಕೆರೆ ಸಂರಕ್ಷಣೆಗೆ ಸ್ವಯಂ ಸೇವೆ ಸಲ್ಲಿಸಬೇಕೆಂಬ ಭಾವನೆಯುಳ್ಳವರು ಅನೇಕರಿದ್ದಾರೆ. ವಾಯುವಿಹಾರಕ್ಕೆ ಬಂದ ಸಂದರ್ಭದಲ್ಲಿ ಸೇವೆ ಮಾಡಲು ಅವಕಾಶ ಮಾಡಿ ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
  • ಕೆರೆಯ ಮೂಲ ವಿಸ್ತೀರ್ಣ ಹಾಗೂ ಕಲಾಮಂದಿರ, ರಂಗಾ ಯಣ ಇನ್ನಿತರ ಉದ್ದೇಶಗಳಿಗೆ ನೀಡಿರುವ ಜಾಗದ ಮಾಹಿತಿ ಮತ್ತು ದಾಖಲೆಯನ್ನು ಸಂಬಂಧಪಟ್ಟವರು ಸಂಗ್ರಹಿಸಬೇಕು.
  •  ವಾಯುವಿಹಾರ ಮಾರ್ಗದ ನಿರ್ವಹಣೆ ಸಮಯದಲ್ಲಿ ಚಿಟ್ಟೆ, ದುಂಬಿ, ಕೀಟಗಳು, ಹುಳು ಉಪ್ಪಟೆಗಳು ಅವಲಂಬಿ ಸಿರುವ ಸಸ್ಯಗಳನ್ನು ಕತ್ತರಿಸದಂತೆ ಸೂಚಿಸಬೇಕು.
  • ಮೀನುಗಾರಿಕೆ ಹಾಗೂ ಎನ್‍ಸಿಸಿ ಅಭ್ಯಾಸಕ್ಕಾಗಿ ದೋಣಿ ಗಳನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಕೆರೆಯ ನೀರಿನಲ್ಲಿ ವಾಸಿಸುವ ಪಕ್ಷಿಗಳಿಗೆ ತೊಂದರೆ ಆಗುತ್ತಿದೆ. ವಲಸೆ ಪಕ್ಷಿಗಳು ಬೇರೆಡೆಗೆ ಹಾರಿ ಹೋಗುತ್ತಿವೆ. ಪಕ್ಷಿಗಳಿಗಾಗಿ ಕೆರೆ ಮಧ್ಯೆ ಪುಟ್ಟ ಪುಟ್ಟ ನಡುಗಡ್ಡೆಗಳನ್ನು ನಿರ್ಮಿಸಬೇಕು. ನೀರಿನ ಮಟ್ಟವನ್ನು ಸಮರ್ಪಕವಾಗಿ ಕಾಯ್ದುಕೊಳ್ಳಬೇಕು.
  •  ನೀರಿನಲ್ಲಿ ಬೆಳೆಯುವ ಸಸ್ಯಗಳು, ಹುಲ್ಲುಗಳನ್ನು ಬಳಸಿ ಕೊಂಡು ಮೀನುಗಳು ಮೊಟ್ಟೆ ಇಡುತ್ತವೆ. ಕೆಲವು ಜಾತಿಯ ಪಕ್ಷಿಗಳು ಅವುಗಳ ನಡುವೆ ಗೂಡುಕಟ್ಟಿ ಮೊಟ್ಟೆ ಇಡು ತ್ತವೆ. ಆದರೆ ಇದರ ಅರಿವಿಲ್ಲದೆ ಎಲ್ಲೆಂದರಲ್ಲಿ ಹುಲ್ಲು ಕೊಯ್ಯುವುದರಿಂದ ಪಕ್ಷಿಗಳಿಗೆ ತೊಂದರೆಯಾಗುತ್ತಿದೆ.
  • ಕೆರೆಯ ಆವರಣವನ್ನು ಯಾವುದೇ ವಾಣಿಜ್ಯ ಉದ್ದೇಶಗಳಿಗೆ ಬಾಡಿಗೆಗೆ ನೀಡಬಾರದು.
  • ಕಾರಂಜಿ ಕೆರೆ, ಲಿಂಗಾಂಬುದಿ ಕೆರೆಗಳಲ್ಲಿರುವಂತೆ ಕುಕ್ಕರಹಳ್ಳಿ ಕೆರೆ ಪ್ರದೇಶಕ್ಕೆ ಪ್ರವೇಶ ಸಮಯ ನಿಗದಿ ಮಾಡಿ, ವಾಯುವಿಹಾರ ಹಾಗೂ ಶೈಕ್ಷಣಿಕ ಅಭ್ಯಾಸಕ್ಕೆ ಬರುವವರಿಗೆ ಮಾತ್ರ ಅವಕಾಶ ನೀಡಬೇಕು.
  • ನಗರದ ಮಧ್ಯೆ ಇಷ್ಟು ಅದ್ಭುತ ಹಾಗೂ ಜೀವ ವೈವಿಧ್ಯತೆ ಹೊಂದಿರುವ ಮತ್ತೊಂದು ಕೆರೆ ಎಲ್ಲಿಯೂ ಇಲ್ಲ. ಆದ್ದರಿಂದ ಇದರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರು ಹೆಚ್ಚು ಆಸಕ್ತಿ ವಹಿಸಿ, ತಾಂತ್ರಿಕ ಸಮಿತಿಯ ಸಲಹೆ ಆಧಾರದಲ್ಲಿ ತ್ವರಿತ ಕ್ರಮ ಕೈಗೊಳ್ಳ ಬೇಕು. ಮೈಸೂರು ಗ್ರಾಹಕರ ಪರಿಷತ್ ಸದಾ ಜೊತೆ ಯಲ್ಲಿರುತ್ತದೆ.