ಕುವೆಂಪುರವರ 115ನೇ ಜನ್ಮ ದಿನಾಚರಣೆ: ಸಾಹಿತ್ಯ ಅವಲೋಕನ

ಮೈಸೂರು: ಕುವೆಂಪುರವರ 115ನೇ ಜನ್ಮ ದಿನಾಚರಣೆ ಅಂಗವಾಗಿ ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕುವೆಂಪು ಸಾಹಿತ್ಯ ಅವಲೋಕನ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ನಟರಾಜ ಪ್ರತಿಷ್ಠಾನದ ಶೈಕ್ಷಣಿಕ ಸಂಯೋಜಕ ಪ್ರೊ.ಕೆ.ಸತ್ಯನಾರಾಯಣ, ಮಾತನಾಡಿ, “ಕನ್ನಡ ಸಾಹಿತ್ಯದ ಅನಘ್ರ್ಯ ರತ್ನರಾದ ಕುವೆಂಪುರವರ ಪ್ರಾರಂಭಿಕ ಅಕ್ಷರಾಭ್ಯಾಸವು ಮನೆಯಲ್ಲೇ ನಡೆದಿರುವುದು ವಿಶೇಷ. ಕುವೆಂಪುರವರ ಸಾಹಿತ್ಯವು ಸರಳವು ಹಾಗೂ ಅರ್ಥ ಮಾಧುರ್ಯತೆ ಯಿಂದಲೂ ಕೂಡಿದೆ. ಇವರು ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ತಮ್ಮ ಬಾಲ್ಯಾವಸ್ಥೆಯಲ್ಲಿ ಆಂಗ್ಲ ಭಾಷೆಯಲ್ಲಿಯೂ ಕವನಗಳನ್ನು ರಚಿಸುತ್ತಿದ್ದ ಮಹಾಕವಿ” ಎಂದು ಬಣ್ಣಿಸಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಜಿ.ಪ್ರಸಾದಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ದರು. ವೇದಿಕೆಯಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಎಂ.ಎಸ್. ಸಂಧ್ಯಾರಾಣಿ, ಹೆಚ್.ಬಿ.ಬಸಪ್ಪ ಉಪಸ್ಥಿತರಿದ್ದರು. ಕು. ಶಯನ ಕುವೆಂಪು ಗೀತೆ ಹಾಡಿದರೆ, ಕು. ಅಪೂರ್ವ ಮತ್ತು ತಂಡದವರು ರೈತ ಗೀತೆಯನ್ನು ಪ್ರಸ್ತುತಪಡಿಸಿದರು. ಕು.ವೀಣಾ ನಿರೂಪಿಸಿದರೆ, ಕು.ಕಾವ್ಯ ವಂದಿಸಿದರು.