ಚಂದ್ರಗ್ರಹಣ: ಮೇಲುಕೋಟೆ ದೇವಾಲಯಗಳಲ್ಲಿ ಪೂಜೆ ಬಂದ್

ಮೇಲುಕೋಟೆ:  ರಕ್ತಚಂದನ ಚಂದ್ರ ಗ್ರಹಣದ ಅಂಗವಾಗಿ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ಪೂಜಾ ಕೈಂಕರ್ಯ ನಡೆಯುವುದಿಲ್ಲ. ಸೂರ್ಯಾಸ್ತವಾಗಿ ಚಂದ್ರೋದಯವಾಗುವ ಮುನ್ನವೇ ದೇವಾಲಯದ ಬಾಗಿಲುಗಳು ಬಂದ್ ಆಗಲಿದ್ದು, ಇಡೀ ದಿನದ ಕಾರ್ಯಕ್ರಮಗಳು ಸಂಜೆ 6.30ರ ವೇಳೆಗೆ ಮುಕ್ತಾಯವಾಗಲಿದೆ.

ರಾತ್ರಿ ನಡೆಯಬೇಕಿದ್ದ ಉಯ್ಯಾಲೋತ್ಸವ ಮತ್ತು ಕೃಷ್ಣರಾಜಮುಡಿ ಜಾತ್ರಾ ಮಹೋತ್ಸವದ ಅಂಕುರಾ ರ್ಪಣೆ ಕಾರ್ಯಕ್ರಮ ಸಂಜೆಯೇ ನಡೆಯಲಿದೆ. ಚಂದ್ರ ಗ್ರಹಣ ಮುಕ್ತಾಯವಾಗಿ ಮರು ದಿನ(ಶನಿವಾರ) ಸೂರ್ಯೋದಯವಾದ ನಂತರ ಬೆಳಿಗ್ಗೆ 7.30ಕ್ಕೆ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರಿಗೆ ಅಭಿಷೇಕ ನಡೆದು ಗ್ರಹಣ ಶಾಂತಿ ಪರಿಹಾರ ನೆರವೇರುತ್ತದೆ. ಗ್ರಹಣದಲ್ಲಿ ಭಾದಿತವಾಗಿರುವ ಶ್ರವಣ ನಕ್ಷತ್ರ ಉತ್ತರಷಾಢ 4ನೇ ಪಾದದ ಮಕರರಾಶಿಯವರು ಅಭಿಷೇಕದಲ್ಲಿ ಪಾಲ್ಗೊಂಡು ತೀರ್ಥ ಸ್ವೀಕರಿಸುವುದು ಹಾಗೂ ಶಾಂತಿ ಮಾಡುವುದು ಶ್ರೇಯಸ್ಕರ ಎಂದು ಸ್ಥಾನೀಕ ಶ್ರೀನಿವಾಸನರಸಿಂಹನ್ ಗುರೂಜಿ ತಿಳಿಸಿದ್ದಾರೆ.