ಚಿತ್ರನಟರಿಂದ ಮಾವುತರಿಗೆ ಭೋಜನ

ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ದಸರಾ ಆನೆಗಳ ಮಾವುತರು ಮತ್ತು ಕಾವಾಡಿಗಳಿಗೆ ಭಾನುವಾರ ಚಲನಚಿತ್ರ ನಟ ದರ್ಶನ್ ಅವರು ಭೋಜನದ ವ್ಯವಸ್ಥೆ ಮಾಡಿದ್ದರು.

ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ 12 ಆನೆಗಳ ಮಾವುತರು, ಕಾವಾಡಿಗಳು, ವಿಶೇಷ ಮಾವುತರು ಹಾಗೂ ಅವರ ಕುಟುಂಬದ ಸದಸ್ಯರಿಗಾಗಿ ಏರ್ಪಡಿಸಲಾಗಿದ್ದ ಭೋಜನ ಕೂಟದಲ್ಲಿ ತುಪ್ಪದ ಹೋಳಿಗೆ, ಗೋಧಿ ಪಾಯಸ, ಚಿರೋಟಿ, ಬಾದಾಮಿ ಹಾಲು, ಮೊಳಕೆ ಕಾಳು ಕೋಸಂಬರಿ, ಸುವರ್ಣ ಗೆಡ್ಡೆ ಚಾಪ್ಸ್, ಬೆಂಡೆಕಾಯಿ ಪೆಪ್ಪರ್ ಡ್ರೈ, ಜೋಳದ ರೊಟ್ಟಿ, ಎಣ್ಣೆಗಾಯಿ, ಶೇಂಗಾ ಚಟ್ನಿಪುಡಿ, ಮಶ್ರೂಮ್ ಬಿರಿಯಾನಿ, ಅನ್ನ-ಸಾಂಬಾರು, ತಿಳಿಸಾರು, ತುಪ್ಪ, ಹಪ್ಪಳ ಸೇರಿದಂತೆ ಇನ್ನಿತರ ತಿನಿಸುಗಳನ್ನು ಬಡಿಸುವ ಮೂಲಕ ಮಾವುತರು ಮತ್ತು ಕಾವಾಡಿಗಳ ಕುಟುಂಬದ ಸದಸ್ಯರು ಸಂತೋಷದಿಂದ ಭೋಜನ ಸವಿಯು ವಂತೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜು, ಚಿತ್ರನಟರಾದ ದರ್ಶನ್, ಪ್ರಜ್ವಲ್ ದೇವರಾಜು, ಸೃಜನ್ ಲೋಕೇಶ್, ಹಾಸ್ಯನಟ ಮಂಡ್ಯ ರಮೇಶ್, ವಿಶ್ವ, ಪ್ರಣಮ್ ದೇವರಾಜು, ಕಾಂಗ್ರೆಸ್ ಮುಖಂಡ ರಾಕೇಶ್ ಪಾಪಣ್ಣ, ಡಿಸಿಎಫ್ ಗಳಾದ ಸಿದ್ರಾಮಪ್ಪ ಚಳ್ಕಾಪುರೆ, ವಿ.ಏಡು ಕೊಂಡಲು, ಆರ್‍ಎಫ್‍ಓ ಅನನ್ಯ ಕುಮಾರ್, ಪಶುವೈದ್ಯ ಡಿ.ಎನ್.ನಾಗರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.