ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ 

ಮನಿಲಾ, ಅ.20- ಫಿಲಿಫೈನ್ಸ್‍ನ ಮಿರಿಯಮ್ ಕಾಲೇಜಿನ ಶಾಂತಿ ಶಿಕ್ಷಣ ಕೇಂದ್ರದಲ್ಲಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾನುವಾರ ಅನಾವರಣಗೊಳಿಸಿದರು.

ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೋವಿಂದ್, “ಮಹಾತ್ಮ ಗಾಂಧಿಯವರ ಈ  ಪ್ರತಿಮೆ ಭಾರತದ ಜನರು ನಿಮಗೆ ನೀಡಿದ ಉಡುಗೊರೆ. ಎಲ್ಲಾ ಜನರು, ಎಲ್ಲಾ ಸಂಸ್ಕೃತಿ ಮತ್ತು ಎಲ್ಲಾ ಸಮಾಜ ಗಳಿಗೆ ಸೇರಿದವರಾದ ಮಹಾತ್ಮ ಗಾಂಧಿ ಶಾಂತಿ, ಅಹಿಂಸೆ ಮತ್ತು ಸಾಮರಸ್ಯವನ್ನು ನಂಬಿದ್ದರು. ನಮ್ಮ ಸುಸ್ಥಿರ ಅಭಿವೃದ್ಧಿಯ ಹಾದಿಯಲ್ಲಿ ಅವರು ನಮಗೆ ಮಾರ್ಗದರ್ಶಕರಾಗಿದ್ದಾರೆ ಎಂದು ನುಡಿದರು.

ಮುಂದುವರೆದು ಮಾತನಾಡಿದ ಅವರು, “ಜೋಸ್ ರಿಜಾಲ್ ಅವರ ಭೂಮಿಯಾಗಿರುವ ಫಿಲಿಫೈನ್ಸ್‍ನಲ್ಲಿ ಗಾಂಧೀಜಿ ಅವರ ಪ್ರತಿಮೆ ಅನಾವರಣಗೊಳಿಸುತ್ತಿರು ವುದಕ್ಕೆ ಸಂತೋಷವಾಗುತ್ತಿದೆ.

ಮಹಾತ್ಮ ಗಾಂಧಿ ಮತ್ತು ಜೋಸ್ ರಿಜಾಲ್ ಇಬ್ಬರೂ ಶಾಂತಿ ಮತ್ತು ಅಹಿಂಸೆಯ ಶಕ್ತಿಯನ್ನು ನಂಬಿದ್ದರು. ನಿಮ್ಮ ರಾಷ್ಟ್ರೀಯ ನಾಯಕನ ಹೆಸರಿನ ನವದೆಹಲಿಯ ಅವೆನ್ಯೂ ನಮಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡುತ್ತಿದೆ” ಎಂದು ಕೋವಿಂದ್ ನುಡಿದರು. ಪ್ರಸ್ತುತ ಐದು ದಿನಗಳ ಫಿಲಿಫೈನ್ಸ್ ಪ್ರವಾಸದಲ್ಲಿರುವ ರಾಷ್ಟ್ರಪತಿ ಕೋವಿಂದ್, ಭದ್ರತೆ, ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸಂಸ್ಕೃತಿಯನ್ನು ಒಳಗೊಂಡ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.