ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡಿ: ಜನತೆಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮನವಿ

ಮೈಸೂರು: ಸ್ವಚ್ಛತೆಗೆ ಹೆಸರುವಾಸಿಯಾಗಿರುವ ಸಾಂಸ್ಕøತಿಕ ನಗರಿ ಮೈಸೂರನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಎಂದು ರಾಜಮಾತೆ ಶ್ರೀಮತಿ ಪ್ರಮೋದಾದೇವಿ ಒಡೆಯರ್ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ದೇವರಾಜ ಮಾರುಕಟ್ಟೆಯ ಚಿಕ್ಕಗಡಿಯಾರದ ಬಳಿ ಏರ್ಪಡಿಸಿದ್ದ ಸ್ವಚ್ಛ ಸರ್ವೇಕ್ಷಣಾ 4ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಮಾಡದಂತೆ ತಡೆಯಬೇಕು. ಪ್ಲಾಸ್ಟಿಕ್ ತಿಂದು ದನ-ಕರುಗಳು ಅನಾರೋಗ್ಯಕ್ಕೊಳಗಾಗುವುದಲ್ಲದೆ ಪರಿಸರ ಹಾನಿಯಾಗಲಿದೆ ಎಂದರು.

ಈಗಾಗಲೇ ರಾಷ್ಟ್ರಮಟ್ಟದಲ್ಲಿ ಸ್ವಚ್ಛತೆಗೆ ಪ್ರಶಸ್ತಿ ಬಂದಿರುವುದರಿಂದ ಈ ಬಾರಿಯೂ ಸ್ವಚ್ಛತೆ ಕಾಪಾಡುವ ಮೂಲಕ ಮತ್ತೊಮ್ಮೆ ಪ್ರಶಸ್ತಿ ಗಿಟ್ಟಿಸಲು ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರ ಅತೀ ಮುಖ್ಯ ಎಂದು ಪ್ರಮೋದಾದೇವಿ ನುಡಿದರು.

ನಂತರ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿದ ಅವರು ಪ್ಲಾಸ್ಟಿಕ್ ಮಾರಾಟ ಮಾಡದಂತೆ ವರ್ತಕರಿಗೆ ಜಾಗೃತಿ ಮೂಡಿಸಿದರಲ್ಲದೆ, ಗ್ರಾಹಕರಿಗೆ ಬಟ್ಟೆ ಬ್ಯಾಗ್‍ಗಳನ್ನು ವಿತರಿಸಿ ಪ್ಲಾಸ್ಟಿಕ್ ಬಳಸಬಾರದೆಂದು ತಿಳುವಳಿಕೆ ಹೇಳಿದರು.

ಮೈಸೂರು ಮಹಾನಗರ ಪಾಲಿಕೆ ಕಮೀಷ್ನರ್ ಕೆ.ಹೆಚ್.ಜಗದೀಶ್, ನಗರ ಪಾಲಿಕೆ ಸದಸ್ಯ ಎಂ.ಡಿ.ನಾಗರಾಜು, ಆರೋಗ್ಯಾಧಿಕಾರಿ ಡಾ.ನಾಗರಾಜು, ಪರಿಸರ ಇಂಜಿನಿಯರ್‍ಗಳಾದ ಮೈತ್ರಿ, ಪೂರ್ಣಿಮಾ, ಯಂಗ್ ಇಂಡಿಯಾ ಹ್ಯೂಮನ್ ಟಚ್ ಸ್ವಯಂ ಸೇವಾ ಸಂಸ್ಥೆ ಪದಾಧಿಕಾರಿಗಳು, ಯುವರಾಜ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಚ್ಛತಾ ಅರಿವು ಮೂಡಿಸಿದರು.