ಆಯುಧ ಪೂಜೆ: ವ್ಯಾಪಾರ ಭರಾಟೆ ಜೋರು

ನಗರದೆಲ್ಲೆಡೆ ಕಳೆಗಟ್ಟಿದ ಸಂಭ್ರಮ, ಹೂ, ಹಣ್ಣು, ಅಲಂಕಾರಿಕ ವಸ್ತುಗಳಿಗೆ ಹೆಚ್ಚಿನ ಬೇಡಿಕೆ
ಮಂಡ್ಯ: ಆಯುಧಪೂಜೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ನಗರದ ಮಾರು ಕಟ್ಟೆಯಲ್ಲಿ ಮುನ್ನ ದಿನವಾದ ಬುಧವಾರ ವ್ಯಾಪಾರ-ವಹಿವಾಟು ಚುರುಕಾಗಿತ್ತು. ಪೂಜಾ ಸಾಮಗ್ರಿಗಳು ಹಾಗೂ ವಾಹನಗಳ ಅಲಂಕಾರಿಕ ವಸ್ತುಗಳಿಗೆ ಸಾಕಷ್ಟು ಬೇಡಿಕೆ ಕಂಡು ಬಂತು.

ಆಯುಧಪೂಜೆಗೆ ಅಗತ್ಯವಾದ ಪೂಜೆ ಸಾಮಗ್ರಿ, ಹಣ್ಣು- ಹಂಪಲು, ಬಾಳೆ ದಿಂಡು, ಮಾವಿನ ಸೊಪ್ಪನ್ನು ಕೊಳ್ಳಲು ಗ್ರಾಹಕರು ಮುಗಿ ಬಿದ್ದಿದ್ದರು. ಹೂವಿಗೆ ಭಾರಿ ಬೇಡಿ ಕೆಯಿದ್ದು, ಎಲ್ಲೆಂದರಲ್ಲಿ ಹೂ ಮಾರಾಟ ಕಂಡು ಬಂತು. ಸೈಕಲ್‍ನಲ್ಲಿ ಬುಟ್ಟಿ ಇಟ್ಟು ಕೊಂಡು ಮನೆ ಮನೆಗೆ ಹೋಗಿ ಹೂ ಮಾರಾಟ ಮಾಡುವ ಹುಡುಗರು ಸಾಕಷ್ಟು ಸಂಖ್ಯೆಯಲ್ಲಿ ಕಂಡು ಬಂದರು. ಅಗತ್ಯ ವಸ್ತು ಗಳ ಬೆಲೆ ಏರಿಕೆ ಹಾಗೂ ಕಳೆದೆರಡು ದಿನ ಗಳಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯ ನಡುವೆಯೂ ಹಬ್ಬದ ಸಂಭ್ರಮಕ್ಕೆ ಕುಂದು ಬರಲಿಲ್ಲ. ನಗರದ ಪ್ರಮುಖ ಬೀದಿಯ ಅಂಗಡಿಗಳಲ್ಲಿ ಬಣ್ಣ, ಬಣ್ಣದ ಕಾಗದ, ಅಲಂ ಕಾರಿಕ ವಸ್ತುಗಳನ್ನು ಹೆಚ್ಚಾಗಿ ಮಾರಾಟಕ್ಕೆ ಇಡಲಾಗಿತ್ತು. ಗುರುವಾರ ಆಯುಧಪೂಜೆ ಹಾಗೂ ಶುಕ್ರವಾರ ವಿಜಯದಶಮಿ ಹಿನ್ನೆಲೆ ಯಲ್ಲಿ ಬುಧವಾರ ಸಂಜೆಯಿಂದಲೇ ಹಬ್ಬದ ಸಡಗರ, ಸಂಭ್ರಮ ಕಂಡು ಬಂತು. ಹೆಚ್ಚಿನ ಮಂದಿ ಪೇಟೆ ಬೀದಿಯಲ್ಲಿ ಅಡ್ಡಾಡಿ ಪೂಜಾ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಿರತ ರಾಗಿದ್ದರು. ಇನ್ನು ಅಲ್ಲಲ್ಲಿ ಅಂಗಡಿಗಳನ್ನು ಸ್ವಚ್ಛಗೊಳಿಸುವ ದೃಶ್ಯ ಸಾಮಾನ್ಯವಾಗಿತ್ತು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಅದರ ಬಿಸಿ ಹಬ್ಬದ ಸಡಗರದ ಮುಂದೆ ಗೌಣವಾಯಿತು. ಸಾಕಷ್ಟು ಅಂಗಡಿಗಳಲ್ಲಿ ಬುಧವಾರವೇ ಆಯುಧಪೂಜೆ ಕಾರ್ಯ ಗಳು ನಡೆದವು. ದ್ವಿಚಕ್ರವಾಹನ ಸೇರಿದಂತೆ ಇತರೆ ವಾಹನಗಳನ್ನು ತೊಳೆಯುವ ವಾಟರ್ ಸರ್ವೀಸ್ ಕೇಂದ್ರಗಳಿಗೂ ಬೇಡಿಕೆ ಕಂಡು ಬಂತು. ಒಟ್ಟಾರೆ ನಗರದಲ್ಲಿ ಅವಳಿ ಹಬ್ಬ ಗಳ ಸಂಭ್ರಮ ಕಳೆಗಟ್ಟಿತ್ತು.

ಉಳಿದಂತೆ ನಗರದ ಪೇಟೆಬೀದಿ, ರೈಲ್ವೆ ರಸ್ತೆ, ಮಾರುಕಟ್ಟೆ ರಸ್ತೆ, ವಿವಿ ರಸ್ತೆ, ಆರ್‍ಪಿ ರಸ್ತೆ, ಸಂಜೆ ವೃತ್ತ, ಮಹಾವೀರ ವೃತ್ತ ಸೇರಿ ದಂತೆ ವಿವಿಧೆಡೆ ಹಣ್ಣು, ಹೂ, ತರಕಾರಿ, ಬಾಳೆ ಕಂದು, ಮಾವಿನ ಸೊಪ್ಪುಗಳ ವ್ಯಾಪಾರ ಭರಾಟೆ ಜೋರಾಗಿತ್ತು.

‘ಮಾರುಕಟ್ಟೆಯಲ್ಲಿ ಕೆ.ಜಿ. ಬೂದು ಗುಂಬಳ ಕಾಯಿಗೆ 20 ರಿಂದ 30 ರೂ. ಇತ್ತು. ಮೇಲು ಕೋಟೆ, ಮದ್ದೂರು, ನಿಡಘಟ್ಟ, ಬನ್ನೂರು ಭಾಗದಲ್ಲಿ ಬೂದುಗುಂಬಳ ಬೆಳೆಯುತ್ತಾರೆ. ಸದ್ಯ ಬೇಡಿಕೆ ಹೆಚ್ಚಾಗಿರುವ ಕಾರಣ ಬೆಂಗ ಳೂರು, ಮೈಸೂರು ಮಾರುಕಟ್ಟೆಗೂ ಹೋಗು ತ್ತಿದೆ. ರೈತರು ಆಯುಧಪೂಜೆ ವೇಳೆಗೆ ಫಸಲು ಬರುವಂತೆ ಬೆಳೆ ಬೆಳೆದಿರುತ್ತಾರೆ. ಏಕೆಂದರೆ ಆಗ ಮಾತ್ರ ಬೂದುಗುಂಬಳಕ್ಕೆ ಹೆಚ್ಚು ಬೇಡಿಕೆ ಸೃಷ್ಟಿಯಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಕಾಯಿ ಸಿಗುತ್ತಿದೆ. ಬೆಲೆಯೂ ಕಡಿಮೆ ಇದೆ’ ಎಂದು ವ್ಯಾಪಾರಿ ಕುಮಾರ್ ತಿಳಿಸಿದರು.

ತರಕಾರಿ ಬೆಲೆಯಲ್ಲಿ ಕೊಂಚ ಏರಿಳಿತ ಕಂಡುಬಂದಿದ್ದು ಕ್ಯಾರೇಟ್, ಬೀಟ್‍ರೂಟ್ 40 ರಿಂದ 60 ರೂ., ಬೀನ್ಸ್ 40ರೂ., ಈರೆ ಕಾಯಿ 30ರೂ., ಟೊಮೆಟೊ 20ರೂ., ನಿಂಬೆಹಣ್ಣು 5ರೂ. ಬೆಲೆ ನಿಗಧಿಯಾಗಿತ್ತು. ಬಾಳೆ ಕಂದು ಜೋಡಿ 40, ಮಾವಿನ ಸೊಪ್ಪು ಒಂದು ಕಟ್ಟಿಗೆ 10 ರೂ.ಗೆ ಮಾರಾಟವಾಗುತ್ತಿದೆ.

ಗಗನಕ್ಕೇರಿದ ಹೂ: ಆಯುಧ ಪೂಜೆಗೆ ಮುಖ್ಯವಾಗಿ ಹೂ ಅಗತ್ಯವಾಗಿದ್ದು, ಹಬ್ಬದ ಅಂಗವಾಗಿ ಬೇಡಿಕೆ ಹೆಚ್ಚಾಗಿತ್ತು. ಮಲ್ಲಿಗೆ 70, ಕಾಕಡ 40, ಕನಕಾಂಬರ 60, ಸೇವಂತಿ 40, ಚೆಂಡು 10, ಗುಲಾಬಿ 10 ರೂ. ಇತ್ತು. ಏಲಕ್ಕಿ ಬಾಳೆಹಣ್ಣು ಕೆ.ಜಿ.ಗೆ 80 ರಿಂದ 100, ಪಚ್ಚಬಾಳೆ 40ರಿಂದ 60, ಕಿತ್ತಳೆ 80, ದ್ರಾಕ್ಷಿ 120, ಕಪ್ಪು ದ್ರಾಕ್ಷಿ 80, ಸೇಬು 100 ರಿಂದ 120ಕ್ಕೆ ಮಾರಾಟವಾಗುತ್ತಿದೆ.