ಅಪ್ರಾಪ್ತ ನವವಿವಾಹಿತೆ ಆತ್ಮಹತ್ಯೆ

ಮಂಡ್ಯ: ಕೌಟುಂಬಿಕ ಕಲಹ ಹಿನ್ನೆಲೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಅಪ್ರಾಪ್ತ ನವವಿವಾಹಿತೆ ನೇಣಿಗೆ ಶರಣಾದ ಘಟನೆ ಮದ್ದೂರು ತಾಲೂಕಿನ ಮಣಿಗೆರೆ ಗ್ರಾಮದಲ್ಲಿ ನಡೆದಿದೆ. ಮಣಿಗೆರೆ ಗ್ರಾಮದ ಶಿಲ್ಪ(16) ಮೃತ ದುರ್ದೈವಿ. ಒಂದು ತಿಂಗಳ ಹಿಂದೆಯಷ್ಟೇ ಗ್ರಾಮದ ಕೃಷ್ಣ ಎಂಬವರ ಜೊತೆ ಈಕೆಯ ವಿವಾಹವಾಗಿತ್ತು. ಶಿಲ್ಪ ಮೂಲತಃ ರಾಮನಗರ ಜಿಲ್ಲೆಯವಳಾಗಿದ್ದು, ಬಡತನದ ಹಿನ್ನೆಲೆಯಲ್ಲಿ ವಿವಾಹ ಮಾಡಿಕೊಡಲಾಗಿತ್ತು ಎಂದು ಹೇಳಲಾಗಿದೆ.

ಸ್ಥಳಕ್ಕೆ ಪೊಲೀಸರು ಸೇರಿದಂತೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಬಾಲಕಿಯನ್ನು ಮದುವೆ ಮಾಡಿಕೊಂಡಿದ್ದ ಕುಟುಂಬದ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಕೆಎಂ ದೊಡ್ಡಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಪತಿ ಸೇರಿದಂತೆ ಅತ್ತೆ-ಮಾವ ತಲೆಮರೆಸಿಕೊಂಡಿದ್ದಾರೆ.