ನಗರಸಭೆ ಕಾರ್ಯಾಚರಣೆ: ರಸ್ತೆ ಬದಿ ಗುಜರಿ ವಸ್ತುಗಳ ತೆರವು

ಹಾಸನ: ರಸ್ತೆ ಬದಿ ಉದ್ದಲಕ್ಕೂ ಇಡಲಾಗಿದ್ದ ಗುಜರಿ ವಸ್ತುಗಳನ್ನು ನಗರಸಭೆ ಸಿಬ್ಬಂದಿ ಸೋಮವಾರ ತೆರವುಗೊಳಿಸಿದರು.

ನಗರದ ಹೊಸಲೈನ್ ರಸ್ತೆ, ಚನ್ನವೀರಪ್ಪ ಕಲ್ಯಾಣ ಮಂಟಪದ ಎದುರು ಹಲವು ವರ್ಷಗಳಿಂದ ಗುಜರಿ ವ್ಯಾಪಾರ ನಡೆಸುತ್ತಿದ್ದು, ಅಂಗಡಿಯವರು ಕಬ್ಬಿಣದ ವಸ್ತುಗಳ ನ್ನೆಲ್ಲಾ ರಸ್ತೆ ಬದಿ ಇಡಲಾಗುತ್ತಿದ್ದರಿಂದ ಪ್ರತಿನಿತ್ಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಹಲವು ಬಾರಿ ನಗರಸಭೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ನಗರಸಭೆ ಆಯುಕ್ತರು ಗುಜರಿ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿದ್ದರು. ಆದರೂ, ಇದಕ್ಕೆ ಮಾಲೀಕರು ಸ್ಪಂದಿಸದ ಕಾರಣ ಸೋಮವಾರ ಬೆಳಿಗ್ಗೆ ನಗರಸಭೆ ಆರೋಗ್ಯಾಧಿಕಾರಿಗಳಾದ ಆದೀಶ್, ಮಂಜುನಾಥ್ ಹಾಗೂ ನಗರಸಭೆ ಸಿಬ್ಬಂದಿಯವರು ಟ್ರ್ಯಾಕ್ಟರ್ ಮೂಲಕ ರಸ್ತೆ ಬದಿ ಹಾಕಲಾಗಿದ್ದ ಗುಜರಿ ಕಬ್ಬಿಣದ ವಸ್ತುಗಳನ್ನು ತೆರವು ಮಾಡಿದರು.

ಸುದ್ದಿಗಾರರೊಂದಿಗೆ ನಗರಸಭೆ ಆರೋಗ್ಯಾಧಿಕಾರಿ ಆದೀಶ್ ಮಾತನಾಡಿ, ಆಯುಕ್ತರ ಸೂಚನೆ ಮೇರೆಗೆ ತೆರವು ಮಾಡಲಾಗಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಯಾರಾದರೂ ರಸ್ತೆ ಮೇಲೆ ವಸ್ತುಗಳನ್ನು ಇಟ್ಟರೇ ತೆರವು ಮಾಡಲಾಗುವುದು ಎಂದು ಎಚ್ಚರಿಸಿದರು.