ಮೈಸೂರು ನ್ಯಾಯಾಲಯದಲ್ಲಿ ಕನ್ನಡದಲ್ಲೇ ವಕೀಲರ ವಾದ ಮಂಡನೆ

ಮೈಸೂರು,ಮಾ.9(ಎಸ್‍ಪಿಎನ್)- ನ್ಯಾಯಾಲಯದಲ್ಲಿ ಕನ್ನಡ ಭಾಷೆ ಬಳಕೆ ಅಧ್ಯಯನ ನಡೆಸಲು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು, ದಾವೆಯೊಂದರ ಕಲಾಪ ವೇಳೆ ವಕೀಲರು ಕನ್ನಡದಲ್ಲಿ ವಾದ-ಪ್ರತಿವಾದ ಮಂಡಿಸುವುದನ್ನು ಆಲಿಸಲು ಸೋಮವಾರ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು.

ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯದ ಆಡಳಿತಾಧಿಕಾರಿ ಅವರ ಅನು ಮತಿ ಪಡೆದು ಮೋಟಾರ್ ವಾಹನ ಅಪ ಘಾತ ಪರಿಹಾರ ಮಂಡಳಿ ಮತ್ತು ಪ್ರಧಾನ ಲಘು ವ್ಯವಹಾರಗಳ ನ್ಯಾಯಾಲಯದಲ್ಲಿ (ಎಂವಿಸಿ ಸಂಖ್ಯೆ 749/2018) ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಅರ್ಜಿದಾರರ ಪರ ವಕೀಲ ಎಸ್.ಜಿ.ಶಿವಣ್ಣೇಗೌಡ ಮತ್ತು 2ನೇ ಪ್ರತಿವಾದಿ ಪರ ವಕೀಲರು ಕನ್ನಡದಲ್ಲೇ ವಾದ ಮಂಡನೆ ಮಾಡಿದರು.
ಪ್ರಕರಣದಲ್ಲಿ ವೈದ್ಯಕೀಯ ಮತ್ತು ತಾಂತ್ರಿಕ ಪದಗಳನ್ನು ಹೊರತುಪಡಿಸಿ, ಉಳಿದೆಲ್ಲಾ ವಿಚಾರಗಳ ಮಂಡನೆ ಕನ್ನಡದಲ್ಲೇ ನಡೆ ಯಿತು ಎಂದು ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ `ಕನ್ನಡ ಕಾಯಕ ವರ್ಷಾಚರಣೆ’ ಹಾಗೂ ಬೆನಗಲ್ ನರ ಸಿಂಗರಾವ್ ಸ್ಮರಣಾರ್ಥ ಮೈಸೂರು ಮಹಾ ನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಎನ್.ಜಿ.ಗಿರೀಶ್, ಮುಳ್ಳೂರು ನಂಜುಂಡಸ್ವಾಮಿ, ಎ.ಎಸ್.ನಾಗರಾಜ್, ಅರವಿಂದ ಶರ್ಮಾ, ಸೌಗಂಧಿಕಾ ವಿ. ಜೋಯಿಸ್, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಭೇರ್ಯ ರಾಮಕುಮಾರ್ ನ್ಯಾಯಾಲಯ ಕಲಾಪ ವೀಕ್ಷಿಸಿದರು.

ಇದಕ್ಕೂ ಮುನ್ನ ಕನ್ನಡ ಜಾಗೃತಿ ಸಮಿತಿ ಸದಸ್ಯರು, ವಕೀಲರ ಸಂಘದ ಕಾರ್ಯದರ್ಶಿ ಬಿ.ಶಿವಣ್ಣ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಭಾಸ್ಕರ್ ಆರಾಧ್ಯ, ರುದ್ರಮೂರ್ತಿ, ಶಾಂಭವ ಮೂರ್ತಿ, ವಿಷ್ಣುವರ್ಧನ್ ಹಾಗೂ ಕೆಲ ವಕೀಲರು ಉಪಸ್ಥಿತರಿದ್ದರು.