20 ಆಟಗಾರರ ತಂಡ ಪ್ರಕಟಿಸಿದ ‘ಮೈಸೂರು ವಾರಿಯರ್ಸ್’

ಮೈಸೂರು,ಆ.14(ಎಂಟಿವೈ)- `ಕರ್ನಾಟಕ ಪ್ರೀಮಿಯರ್ ಲೀಗ್ ಟಿ-20′ ಎಂಟನೇ ಆವೃತ್ತಿಯ ಕ್ರಿಕೆಟ್ ಟೂರ್ನಿಯ ಮೈಸೂರು ವಾರಿಯರ್ಸ್ ತಂಡದ ಫ್ರಾಂಚೈಸಿಯಾಗಿರುವ ಎನ್.ಆರ್. ಗ್ರೂಪ್ 20 ಆಟಗಾರರು ಇರುವ ತನ್ನ ತಂಡವನ್ನು ಬುಧವಾರ ಪ್ರಕಟಿಸಿತು.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಇಂದು ಬೆಳಿಗ್ಗೆ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ತಂಡದ ಎಲ್ಲಾ ಆಟಗಾರರು ಹಾಗೂ ಇನ್ನಿತರ ಸದಸ್ಯ ರನ್ನು ವೇದಿಕೆಗೆ ಆಹ್ವಾನಿಸುವ ಮೂಲಕ ಪರಿಚಯ ಮಾಡಿಕೊಡಲಾಯಿತು. ಮೈಸೂರು ವಾರಿಯರ್ಸ್ ತಂಡದ ನಾಯಕ ನಾಗಿ ಅಮಿತ್ ವರ್ಮಾ, ಉಪ ನಾಯಕ ನಾಗಿ ಜೆ.ಸುಚಿತ್ ಹಾಗೂ ಮುಖ್ಯ ತರ ಬೇತುದಾರರಾಗಿ ಆರ್.ಎಕ್ಸ್.ಮುರಳೀ ಧರ್ ಆಯ್ಕೆಯಾಗಿದ್ದಾರೆ. ತಂಡದಲ್ಲಿ 8 ಸ್ಥಳೀಯ ಆಟಗಾರರಿದ್ದಾರೆ ಹಾಗೂ ಇದೇ ಮೊದಲ ಬಾರಿಗೆ ಕೆಪಿಎಲ್ ಆಡುತ್ತಿರುವ ಐವರು ವಾರಿಯರ್ಸ್ ತಂಡದಲ್ಲಿದ್ದಾರೆ.

ತಂಡದ ಮಾಲೀಕ ಮತ್ತು ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ಮಾತನಾಡಿ, 2014ರ ಆವೃತ್ತಿಯಲ್ಲಿ ನಮ್ಮ ತಂಡ ಉತ್ತಮ ಪ್ರದ ರ್ಶನ ನೀಡುವ ಮೂಲಕ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಈ ಬಾರಿಯೂ ನಮ್ಮ ತಂಡದಲ್ಲಿ ಅಮಿತ್‍ವರ್ಮಾ, ಜೆ.ಸುಚಿತ್, ಶೋಯೆಬ್ ಮ್ಯಾನೇಜರ್ ಅವರಂತಹ ಅನುಭವಿ ಆಟಗಾರರಿದ್ದಾರೆ. ಈ ಬಾರಿಯೂ ಕಪ್ ಗೆಲ್ಲುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಂಡದ ತರಬೇತುದಾರ ಆರ್.ಎಕ್ಸ್. ಮುರುಳೀಧರ್ ಮಾತನಾಡಿ, ನಮ್ಮ ತಂಡ ಬ್ಯಾಟಿಂಗ್, ಬೌಲಿಂಗ್ ವಿಭಾಗಗಳೆರಡ ರಲ್ಲೂ ಉತ್ತಮವಾಗಿದೆ. ಹೊಸಬರಾದರೂ ಪ್ರತಿಭಾನ್ವಿತ ಆಟಗಾರರು ತಂಡದಲ್ಲಿದ್ದಾರೆ. ಈ ಬಾರಿ ಕಪ್ ಗೆಲ್ಲುವುದೇ ನಮ್ಮ ಗುರಿ ಎಂದರು. ಈ ಸಂದರ್ಭ ಮೈಸೂರು ವಾರಿಯರ್ಸ್ ತಂಡದ ಮಾಲೀಕರಾದ ಪವನ್ ರಂಗಾ, ಕಿರಣ್ ರಂಗಾ ಮತ್ತಿ ತರರು ಉಪಸ್ಥಿತರಿದ್ದರು.