`ಪ್ರಸ್ತುತ ಪ್ರದರ್ಶಕ ಕಲೆಗಳ ಮುಂದಿರುವ ಸವಾಲುಗಳು’ ಮಾ.26, 27ರಂದು ರಾಷ್ಟ್ರಮಟ್ಟದ ವಿಚಾರ ಸಂಕಿರಣ

ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳಿಂದ ಪ್ರಬಂಧ ಆಹ್ವಾನ
ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಬೆಂಗಳೂರಿನ ಥಿಯೇಟರ್ ರಿಸರ್ಚ್ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಮಾ.26 ಮತ್ತು 27ರಂದು `ಪ್ರಸ್ತುತ ಪ್ರದರ್ಶಕ ಕಲೆಗಳ ಮುಂದಿರುವ ಸವಾಲುಗಳು’ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣ ಆಯೋಜಿಸಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪ್ರದರ್ಶಕ ಕಲೆಗಳ ಸ್ವರೂಪ, ವ್ಯಾಪ್ತಿ ಕೂಡ ಬದಲಾಗುತ್ತಿದ್ದು, ಪ್ರತಿ ಕಲಾ ಪ್ರಕಾರಗಳು ಅನೇಕ ಸವಾಲುಗಳನ್ನು ಎದು ರಿಸುತ್ತಿವೆ. ಈ ನಿಟ್ಟಿನಲ್ಲಿ ಪ್ರದರ್ಶಕ ಕಲೆಗಳು ಹಾಗೂ ಕಲಾವಿದರ ಸಂರಕ್ಷಣೆ ಹಾಗೂ ಸಾಂಗೋಪನೆ ದೃಷ್ಟಿಯಲ್ಲಿ ಕಲಾ ಪ್ರಕಾರಗಳು ಎದುರಿಸುತ್ತಿರುವ ಸವಾಲುಗಳನ್ನು ಕ್ರೋಢೀ ಕರಿಸುವುದು ಸೇರಿದಂತೆ ಎಲ್ಲಾ ವಿಷಯಗಳ ಮೇಲೆ ಬೆಳಕು ಚೆಲ್ಲುವ ಗಮನಾರ್ಹ ಕಾರ್ಯ ಸಾಧನೆಯ ಉದ್ದೇಶದಿಂದ ಈ ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಪ್ರಸ್ತುತ ತಬಲ ಘರಾಣೆಗಳು ಎದುರಿಸುತ್ತಿರುವ ಸವಾಲುಗಳು, ಪ್ರಸ್ತುತ ಪ್ರದರ್ಶಕ ಕಲೆಗಳಲ್ಲಿ ಹಿಂದೂಸ್ಥಾನಿ ಸಂಗೀತದ ಸ್ಥಿತಿ ಗತಿ, ಶಿಕ್ಷಣದಲ್ಲಿ ಪ್ರದರ್ಶಕ ಕಲೆಗಳ ಅಳವಡಿಕೆ ಮತ್ತು ಸವಾಲುಗಳು, ಉದ್ಯೋಗಾವಕಾಶದಲ್ಲಿ ವಾದ್ಯ ಕಲಾವಿದರು ಎದುರಿಸುತ್ತಿರುವ ಸವಾಲುಗಳು, ತಬಲ ಕ್ಷೇತ್ರದಲ್ಲಿ ಸಂಶೋಧನೆಗಳ ಪಾತ್ರ, ಪ್ರದರ್ಶಕ ಕಲೆಗಳು ಮತ್ತು ಸಂವಹನ ಮಾಧ್ಯಮಗಳು, ಸಂಗೀತ ವಾದ್ಯ ತಯಾರಿಕೆ ಮತ್ತು ಸಂರಕ್ಷಣೆ ಸೇರಿದಂತೆ ಅನೇಕ ಸವಾಲುಗಳ ಕುರಿತು ವಿಚಾರ ಸಂಕಿರಣದಲ್ಲಿ ಬೆಳಕು ಚೆಲ್ಲಲಾಗುವುದು.

ಇಲ್ಲಿರುವ ಯಾವುದಾದರೂ ಒಂದು ವಿಷಯ ಆಯ್ಕೆ ಮಾಡಿಕೊಂಡು ಪ್ರಬಂಧ ಮಂಡಿಸಲು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಅವಕಾಶವಿದೆ. ಆಸಕ್ತರು ತಮ್ಮ ವಿವರಗಳನ್ನು ಮಾ.20ರೊಳಗೆ 300 ಪದಗಳಿಗೆ ಮೀರದಂತೆ ಸಾರಲೇಖವನ್ನು ksghpartsseminar@gmail.com ಗೆ ಇ-ಮೇಲ್ ಮಾಡಬಹುದು ಎಂದು ಸಂಗೀತ ವಿವಿ ಪ್ರಭಾರ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ- 9964077736, 9845328355 ಸಂಪರ್ಕಿಸಬಹುದು.