ಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಆಗ್ರಹಿಸಿ ಪೋಷಕರ ಪ್ರತಿಭಟನೆ

ಚಾಮರಾಜನಗರ ಜ.12- ಚಾಮರಾಜನಗರ ಉಪ್ಪಾರಬೀದಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಹಿಂದುಳಿದ ವರ್ಗದ ಮಕ್ಕಳಾಗಿರುತ್ತಾರೆ.

2017ರಲ್ಲಿ ರಾಷ್ಟ್ರೀಯ ಹೆದ್ದಾರಿ 209ರ ಅಗಲೀಕರಣ ಮಾಡುವಾಗ ಶಾಲೆಯ ಕಾಂಪೌಂಡ್ ಕೆಡವಿ ಹಾಕಿರುತ್ತಾರೆ. ಇದುವರೆವಿಗೂ ಸುತ್ತುಗೋಡೆ ನಿರ್ಮಾಣವಾಗಿರುವುದಿಲ್ಲ. ಇದರ ಬಗ್ಗೆ ಜಿಲ್ಲಾಧಿ ಕಾರಿಗಳಿಗೆ, ಶಾಸಕರಿಗೆ, ಸಂಸದರಿಗೆ ಹಲವಾರು ಬಾರಿ ಮನವಿ ಮಾಡಲಾಗಿದ್ದರೂ ಇದುವರೆವಿಗೂ ನಿರ್ಮಾಣವಾಗಿಲ್ಲ. ಇದರಿಂದ ರಾತ್ರಿ ವೇಳೆಯಲ್ಲಿ ಕುಡುಕರು, ದನಕರುಗಳು ಒಳ ಪ್ರವೇಶಿಸುತ್ತಿದ್ದು, ಶಾಲಾ ಪರಿಸರ ಹಾಳಾಗುತ್ತಿದೆ. ಇದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ ಎಂದು ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಕೂಸಣ್ಣಸ್ವಾಮಿ ಆರೋಪಿಸಿದ್ದಾರೆ.

ಶಾಲಾ ಆವರಣದಲ್ಲಿ ನೀರು ನಿಲ್ಲುತ್ತಿದ್ದು, ಚರಂಡಿಗೆ ಹರಿದು ಹೋಗದೆ ನಿಂತಲ್ಲೇ ಕೊಳಚೆ ಯಾಗಿ ಸೊಳ್ಳೆಗಳ ನೆಲೆಯಾಗಿದೆ. ಇದರಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸುತ್ತುಗೋಡೆ ನಿರ್ಮಾಣ ಹಾಗೂ ಶಾಲಾ ಕೊಠಡಿಗಳನ್ನು ದುರಸ್ತಿ ಮಾಡಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸರ್ಕಾರವು ಗಮನಹರಿಸದಿದ್ದರೆ ಉಗ್ರವಾಗಿ ಪ್ರತಿಭಟನೆ ಮತ್ತು ರಾಷ್ಟ್ರೀಯ ಹೆದ್ದಾರಿ ರಸ್ತೆತಡೆ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಮಕ್ಕಳ ಪೋಷಕರಾದ ಮೀನಾಕ್ಷಿ, ನಾಗಮಣಿ, ಶಿವಬಸಮ್ಮ, ಸಾವಿತ್ರಮ್ಮ, ನಂಜುಂಡಸ್ವಾಮಿ, ಸಮೀವುಲ್ಲಾ, ಮಹದೇವಶೆಟ್ಟಿ ಹಾಗೂ ಹಲವಾರು ಮಂದಿ ಭಾಗವಹಿಸಿದ್ದರು.