ಚಾಮುಂಡಿಬೆಟ್ಟದಲ್ಲಿ ಜನ ಜಾತ್ರೆ

ಮೈಸೂರು: ದಸರಾ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ್ದ ಪ್ರವಾಸಿಗರು ಹಾಗೂ ದಸರಾ ಕರ್ತವ್ಯಕ್ಕೆಂದು ಆಗಮಿಸಿದ್ದ ಪೊಲೀಸರು ಶನಿವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಭಾರೀ ಜನ ಹಾಗೂ ವಾಹನ ಸಂದಣಿ ಹೆಚ್ಚಾಗಿತ್ತು.

ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ ಸೇರಿ ದಂತೆ ವಿವಿಧ ರಾಜ್ಯಗಳಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಕ್ಕೆ ಆಗಮಿಸಿದ್ದರು. ಏಕಕಾಲಕ್ಕೆ ನೂರಾರು ವಾಹನಗಳು ಬೆಟ್ಟಕ್ಕೆ ಬಂದ ಹಿನ್ನೆಲೆಯಲ್ಲಿ `ವ್ಯೂ ಪಾಯಿಂಟ್’ ಬಳಿಯೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಲ್ಲದೆ ದೇವಾಲಯಕ್ಕೆ ತೆರಳಲು ಭಕ್ತರು ಹಾಗೂ ಪ್ರವಾಸಿಗರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯ ಬೇಕಾಗಿ ಬಂತು. ಟ್ರಾಫಿಕ್ ಜಾಮ್ ಆಗದಂತೆ ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದರು.

ಕೇಂದ್ರ ಸಚಿವ ಸುರೇಶ್ ಪ್ರಭು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಮಹೇಶ್ವರಿ, ನ್ಯಾಯ ಮೂರ್ತಿಗಳಾದ ಬಿ.ವಿ.ನಾಗರತ್ನ ಸೇರಿದಂತೆ ಹಲವು ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ನಾಡದೇವಿಯ ದರ್ಶನ ಪಡೆದರು.