ಬಂಡಾಯ ಅಭ್ಯರ್ಥಿಗಳ ಮನವೊಲಿಕೆ: ಹೆಚ್‍ಡಿಡಿ

ಬೆಂಗಳೂರು: ಪಕ್ಷದಲ್ಲಿ ಅವಕಾಶ ದೊರೆಯದೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿ ದಿರುವವರನ್ನು ಮನವೊಲಿಸಿ ಹಿಂದಕ್ಕೆ ಸರಿಸುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಇಂದಿಲ್ಲಿ ತಿಳಿಸಿದ್ದಾರೆ.

ಅಭ್ಯರ್ಥಿಗಳ ಆಯ್ಕೆ ಗೊಂದಲ ಮುಗಿದಿದೆ. ಕೆಲವು ಕ್ಷೇತ್ರಗಳಲ್ಲಿ ರುವ ಭಿನ್ನಮತೀಯರ ಮನವೊಲಿಸುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.

ಆಸ್ಟ್ರೇಲಿಯಾದ ಉಪ ಕೌನ್ಸಲೇಟ್ ಜನರಲ್ ಜಾನ್ ಬೋನರ್ ಅವರ ಭೇಟಿಯ ನಂತರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಬೋನರ್ ಜೊತೆ ಸ್ವಾಭಾವಿಕ ವಾಗಿ ರಾಜ್ಯ ಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದೇವೆ. ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ನಮ್ಮ ಪ್ರಾದೇಶಿಕ ಪಕ್ಷ ಯಾವ ರೀತಿ ಹೋರಾಟ ಮಾಡಲಿದೆ ಎಂದು ಕೇಳಿದರು. ಅದಕ್ಕೆ ನಮ್ಮರಾಜ್ಯದ ನೆಲ, ಜಲ, ಭಾಷೆಯ ಉಳಿವಿಗಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದೇನೆ.

ಪ್ರಧಾನಿಯಾಗಿದ್ದಾಗ ನಾನು ಬಹಳಷ್ಟು ಸಾಧನೆ ಮಾಡಿರುವುದನ್ನು ಬೋನರ್ ಅರಿತಿದ್ದಾರೆ. ಆದರೆ, ನನ್ನ ದುರಾದೃಷ್ಟ ನಮ್ಮ ರಾಜ್ಯದ ಜನರು ನಾನೇನು ಮಾಡಿದ್ದೇನೆ ಎಂಬುದನ್ನು ಅರಿತುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಚುನಾವಣೆ ನಂತರ ಕಿಂಗ್ ಮೇಕರ್ ಅಥವಾ ಕಿಂಗ್ ಆಗ್ತೀರಾ ಎಂದು ಕೂಡ ಅವರು ಕೇಳಿದರು. ಅದಕ್ಕೆ ಚುನಾವಣಾ ಫಲಿತಾಂಶ ಬಂದ ಮೇಲೆ ನೋಡೋಣ ಎಂದು ಹೇಳಿರುವುದಾಗಿ ತಿಳಿಸಿದರು. ಸಿಎಂ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದಲ್ಲಿ ಭ್ರಷ್ಟರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ನಾನು ಜಾರಿಗೆ ತಂದಿದ್ದ ಲೋಕಾಯುಕ್ತ ಸಂಸ್ಥೆಯನ್ನು ಮೂಲೆಗುಂಪು ಮಾಡಿದ್ದಾರೆ. ಕಾವೇರಿ-ಮಹದಾಯಿ ವಿಚಾರದಲ್ಲಿ ಏನೆಲ್ಲ ಹೋರಾಟ ಮಾಡುತ್ತಿದ್ದೇವೆ ಎಂಬುದನ್ನು ಅವರ ಗಮನಕ್ಕೆ ತಂದಿರುವುದಾಗಿ ಅವರು ಹೇಳಿದರು.