ಪಿಕ್ ಪಾಕೆಟ್, ಮೊಬೈಲ್ ಕಳ್ಳನ ಬಂಧನ

ಮಂಡ್ಯ: ಮಕ್ಕಳನ್ನು ಬಳಸಿಕೊಂಡು ಮೊಬೈಲ್ ಮತ್ತು ಪಿಕ್ ಪಾಕೇಟ್ ಮಾಡುತ್ತಿದ್ದ ತೆಲಂಗಾಣ ಮೂಲದ ಕಳ್ಳನೋರ್ವನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಾಗಮಂಗಲದಲ್ಲಿ ಮಂಗಳವಾರ ನಡೆದಿದೆ. ತೆಲಂಗಾಣ ಮೂಲದ ಮಂಜೇಶ ಎಂಬಾತನೇ ಪಿಕ್ ಪಾಕೆಟ್‍ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ .

ಘಟನೆ ವಿವರ: ಇಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಬಳಿ ವ್ಯಕ್ತಿಯೊಬ್ಬನ ಜೇಬಿನಲ್ಲಿದ್ದ 7 ಸಾವಿರ ರೂಪಾಯಿ ನಗದನ್ನು ಮಂಜೇಶ ಕದಿಯಲೆತ್ನಿಸಿ ದ್ದಾನೆ, ತಕ್ಷಣ ಎಚ್ಚೆತ್ತ ಆತ ಕಿರುಚಿಕೊಂಡು ಕಳ್ಳನನ್ನು ಹಿಡಿಯಲು ಮುಂದಾದ, ಸಾರ್ವಜನಿಕರು ಸಹ ಮಂಜೇಶ್‍ನಿಗೆ ಧರ್ಮದೇಟು ನೀಡಿ ಕದ್ದಿದ್ದ 7 ಸಾವಿರ ರೂಪಾಯಿ ಗಳನ್ನು ಕಿತ್ತುಕೊಂಡಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಸಾರ್ವಜನಿಕರ ಕೈ ಸಿಕ್ಕಿಬಿದ್ದಿದ್ದ ಮಂಜೇಶನನ್ನು ಬಂಧಿಸಿ ಪಟ್ಟಣ ಠಾಣೆಗೆ ಕರೆದೊಯ್ದಿದ್ದಾರೆ.

ಈತನ ಜೊತೆಯಲ್ಲಿದ್ದರೆನ್ನಲಾದ ಒಬ್ಬ ಮಹಿಳೆ ಮತ್ತು ಯುವಕನೊಬ್ಬ ಮಂಜೇಶನ ಮೇಲೆ ಹಲ್ಲೆ ನಡೆಯುತ್ತಿದ್ದುದನ್ನು ಕಂಡು ಪಲ್ಸರ್ ಬೈಕಿನಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಒಂದು ಮೂಲದ ಪ್ರಕಾರ ಈ ಕಳ್ಳರು ಮೂಲತಃ ತೆಲಂಗಾಣದ ವರಾಗಿದ್ದು ತಂಡದಲ್ಲಿ ಆರು ಜನರಿದ್ದು ಮಕ್ಕಳನ್ನು ಬಳಸಿಕೊಂಡು, ಸಾರ್ವಜನಿಕರಿಂದ ಮೊಬೈಲ್ ಮತ್ತು ಹಣವನ್ನು ಲಪಟಾಯಿಸುತ್ತಿದ್ದರು ಎನ್ನಲಾಗಿದೆ. ಸೋಮವಾರ (ಜೂ.11ರ)ದಂದು ಸಹ ಬೆಳ್ಳೂರು ಕ್ರಾಸ್‍ನಲ್ಲಿ ಕೆಲವರ ಜೇಬಿನಿಂದ ಹಣ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ.