ಸೋಮವಾರಪೇಟೆಯಲ್ಲಿ ಪೊಲೀಸರ ಪಥ ಸಂಚಲನ

ಸೋಮವಾರಪೇಟೆ: ಲೋಕಸಭಾ ಚುನಾವಣಾ ಹಿನ್ನೆಲೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಿಎಸ್‍ಎಫ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಪಟ್ಟಣದಲ್ಲಿ ಪಥಸಂಚಲನ ನಡೆಸಿದರು.

ಮತದಾನದ ಬಗ್ಗೆ ಜಾಗೃತಿ ಹಾಗೂ ಸಾರ್ವಜನಿಕ ವಲಯದಲ್ಲಿ ಭಯಾತಂಕವನ್ನು ದೂರ ಮಾಡುವ ಉದ್ದೇಶದಿಂದ ನಡೆಸಲಾದ ಪಥ ಸಂಚಲನದಲ್ಲಿ ಬಿಎಸ್‍ಎಫ್‍ನ ಯೋಧರು, ಕೆಎಸ್‍ಆರ್‍ಪಿ ತುಕಡಿ, ಜಿಲ್ಲಾ ಸಶಸ್ತ್ರ ದಳ, ಸ್ಥಳೀಯ ಪೊಲೀಸರು ಸೇರಿದಂತೆ ಸುಮಾರು 120 ಮಂದಿ ಸಿಬ್ಬಂದಿಗಳು ಶಸ್ತ್ರ ಸಜ್ಜಿತರಾಗಿ ಭಾಗವಹಿಸಿದ್ದರು. ಇಲ್ಲಿನ ಕಕ್ಕೆಹೊಳೆ, ಮಾನಸ ಸಭಾಂಗಣ ರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆ, ಪುಟ್ಟಪ್ಪ ಸರ್ಕಲ್, ಮಡಿಕೇರಿ ರಸ್ತೆ, ಅಂಬೇಡ್ಕರ್ ಸರ್ಕಲ್, ಮುಖ್ಯ ರಸ್ತೆ, ಖಾಸಗಿ ಬಸ್ ನಿಲ್ದಾಣ, ಜೇಸೀ ವೇದಿಕೆ ಮೂಲಕ ಪೊಲೀಸ್ ಠಾಣೆಯವರೆಗೆ ಪಥ ಸಂಚಲನ ನಡೆಯಿತು.

ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್, ಪ್ರೊಬೇಷನರಿ ಠಾಣಾಧಿಕಾರಿ ಮೋಹನ್ ರಾಜ್ ಅವರುಗಳು ಹಾಜರಿದ್ದರು.