ವಕೀಲೆ ಸುಮನಗೆ ಪ್ರೇರಣಾ ಪ್ರಶಸ್ತಿ ಪ್ರಧಾನ ಶಕ್ತಿಧಾಮದ ಮಕ್ಕಳಿಂದ ಕಾರ್ಯಕ್ರಮ ಅಚ್ಚುಕಟ್ಟು ನಿರ್ವಹಣೆ

ಮೈಸೂರು: ಸುಂದರ ಸಂಜೆಯಲ್ಲಿ ಬಣ್ಣದ ಉಡುಗೆಗಳನ್ನು ತೊಟ್ಟ ಹೆಣ್ಣುಮಕ್ಕಳ ಮುಖದಲ್ಲಿ ಮಂದಹಾಸ ಮನೆ ಮಾಡಿತ್ತು.
ಕಾರ್ಯಕ್ರಮದ ನಿರೂಪಣೆ ಹೊಣೆ ಹೊತ್ತಿದ್ದ ಮಕ್ಕಳು, ನಿರೂಪಣೆ, ಸ್ವಾಗತ, ವಂದನಾರ್ಪಣೆವರೆವಿಗೂ ತಮ್ಮ ತೊದಲು ನುಡಿಗಳಿಂದಲೇ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ತಾವೇ ರಚಿತ ಸ್ವಾಗತ ಹಾಡಿನ ಮೂಲಕ ವಿನೂತನವಾಗಿ ಆಹ್ವಾನಿಸಿದ್ದು ವಿಶೇಷವಾಗಿತ್ತು.

ಊಟಿ ರಸ್ತೆಯ ಶಕ್ತಿಧಾಮದಲ್ಲಿ ಚಿಗುರು ಮಕ್ಕಳ ಕಲಾಸಂಸ್ಥೆ ಶನಿವಾರ ಆಯೋಜಿಸಿದ್ದ ಪ್ರೇರಣಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಕ್ಕಳು, ನಿರೂಪಣೆಯ ದಿಟ್ಟತನ ಪ್ರದರ್ಶಿಸಿ ಗಣ್ಯರು ನಿಬ್ಬೆರಗಾಗುವಂತೆ ಮಾಡಿದರು.
ಈ ಸಮಾರಂಭದಲ್ಲಿ ಚಿಂತಕಿ ಹಾಗೂ ಕಲಾವಿದೆ ಪ್ರೊ.ಚ.ಸರ್ವಮಂಗಳ ಅವರು ವಕೀಲರಾದ ಸುಮನ ಅವರಿಗೆ `ಪ್ರೇರಣಾ ಪ್ರಶಸ್ತಿ’ ಪ್ರಧಾನ ಮಾಡಿದರೆ, ಮಕ್ಕಳು ಫಲ-ತಾಂಬೂಲ ನೀಡಿ ಗೌರವಿಸಿದರು.

ನಂತರ ಚಿಂತಕಿ ಸರ್ವಮಂಗಳಾ ಅವರು ಮಾತನಾಡಿ, ಸುಮನರವರು ಶಕ್ತಿಧಾಮವನ್ನು ಚೆನ್ನಾಗಿ ಕಟ್ಟಿ ಬೆಳೆಸಿದ್ದು, ಇವರು ಶಕ್ತಿಧಾಮದ ಪ್ರಧಾನಮಂತ್ರಿ ಇದ್ದಂತೆ. ಸುಮನಾರನ್ನು ಚಿಕ್ಕವಳಿದ್ದಾಗಿನಿಂದ ನೋಡಿದ್ದೇನೆ. ಅಂದಿನಿಂದ ಇಂದಿನವರೆಗೂ ಆ ದಿಟ್ಟತನ ಹಾಗೆಯೇ ಇದೆ. ಈಗಲೂ ಗಟ್ಟಿ ಧ್ವನಿಯಲ್ಲಿ ಅನ್ಯಾಯದ ವಿರುದ್ಧ ಪ್ರತಿಭಟಿಸುತ್ತಾರೆ. ಇಂಥ ದಿಟ್ಟತನದ ಸುಮನಾರನ್ನು ಗೌರವಿಸಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾನು ಲೈಂಗಿಕ ದೌರ್ಜನ್ಯ ಸಮಿತಿಯ ಅಧ್ಯಕ್ಷೆಯಾಗಿದ್ದಾಗ ಸುಮನ ಸದಸ್ಯರಾಗಿದ್ದರು. ಏನಾದರೂ ತಪ್ಪು ಕಂಡುಬಂದರೆ ಕೂಡಲೇ ತಿದ್ದುವ ಕೆಲಸ ಮಾಡುತ್ತಿದ್ದರು. ಜತೆಗೆ ಒಡೆದ ಕುಟುಂಬಗಳನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಗಾಗಿ ಮಕ್ಕಳು ಸುಮನಾರನ್ನು ಪ್ರೇರಣೆಯಾಗಿ ತೆಗೆದುಕೊಂಡು ಬೆಳೆಯಬೇಕು ಎಂದು ಸಲಹೆ ನೀಡಿದ ಅವರು, ಸುಮನಾಗೆ ನ್ಯಾಯಕ್ಕಾಗಿ ದುಡಿಯುವ ಮನಸ್ಸು, ಧೈರ್ಯ ಮತ್ತು ಶಕ್ತಿಯನ್ನು ತಂದು ಕೊಟ್ಟವರು ತಂದೆ ನಾಗರಾಜುರವರು ಎಂದು ಹೇಳಿದರು.

ನಂತರ ಚಿಣ್ಣರು ಚಂದ ಮಾಮನ ಹಾಡಿಗೆ ಮನೋಜ್ಞವಾಗಿ ನೃತ್ಯ ಪ್ರದರ್ಶಿಸಿದ ಎಲ್ಲರನ್ನು ರಂಜಿಸಿದರು. ಹಿರಿಯ ಸಮಾಜವಾದಿ ಪ.ಮಲ್ಲೇಶ್, ಚಿಗುರು ಮಕ್ಕಳ ಕಲಾಸಂಸ್ಥೆಯ ಅಧ್ಯಕ್ಷೆ ಡಾ.ಟಿ.ಎಸ್.ಶ್ರೀವಳ್ಳಿ, ಸಂಸ್ಕøತಿ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.