ನಾವು… ನಾವು… ಎಂದು ಮೆರೆದವರು ಮಣ್ಣಾಗಿದ್ದಾರೆ…!

ಕೆ.ಆರ್.ಪೇಟೆ,ಡಿ.9(ಶ್ರೀನಿವಾಸ್/ನಾಗಯ್ಯ)-ನಾವು, ನಾವು ಎಂದು ಮೆರೆದವರು ಮಣ್ಣಾಗಿದ್ದಾರೆ ಎಂಬುದನ್ನು ಕೆ.ಆರ್.ಪೇಟೆ ಮತದಾರರು ಈ ಚುನಾವಣೆ ಮೂಲಕ ತೋರಿಸಿದ್ದಾರೆ ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಅವರು ದೇವೇಗೌಡರ ಕುಟುಂಬದ ಮೇಲೆ ಹರಿಹಾಯ್ದಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಮೈಸೂರಿನ ಕೆಲವು ಕ್ಷೇತ್ರಗಳು ಒಂದು ಕುಟುಂಬಕ್ಕೆ ಸೀಮಿತವಲ್ಲ ಎಂಬುದನ್ನು ಮತ್ತೊಮ್ಮೆ ಕೆ.ಆರ್.ಪೇಟೆ ಕ್ಷೇತ್ರದ ಪ್ರಬುದ್ದ ಮತದಾರರು ಸಾಬೀತು ಮಾಡಿದ್ದಾರೆ. ನಾನು ಹಾಸನದಲ್ಲಿ ಗೆದ್ದಾಗ ಆಕಸ್ಮಿಕ ಎಂದಿದ್ದರು. ಇಲ್ಲಿನ ಗೆಲುವು ಆ ಹೇಳಿಕೆಗಳಿಗೆ ತಕ್ಕ ಉತ್ತರ ನೀಡಿದೆ. ಹಣ ಬಲದಿಂದ ನಾವು ಗೆದ್ದಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಜನ ನಮ್ಮನ್ನು ಬೆಂಬಲಿಸಿ ದ್ದಾರೆ. ತಾಲೂಕು ಸಮಗ್ರ ಅಭಿವೃದ್ಧಿ ಕಾರಣಲಿದೆ. ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆ ಯಾದ್ಯಂತ ಬಿಜೆಪಿ ವಿಜಯಪತಾಕೆ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.