ಮರಾಠ ಪ್ರಾಧಿಕಾರ ಖಂಡಿಸಿ ಪ್ರತಿಭಟನೆ

ಮೈಸೂರು,ಜ.9(ಆರ್‍ಕೆ)-ಮರಾಠ ಅಭಿವೃದ್ಧಿ ನಿಗಮವನ್ನು ರದ್ದುಪಡಿಸುವಂತೆ ಕನ್ನಡಪರ ಹೋರಾಟಗಾರರು ಇಂದು ಮೈಸೂರಿನ ರೈಲು ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು. ಕನ್ನಡ ಭಾಷೆ, ನೆಲ, ಜಲ, ಸಂಸ್ಕøತಿ ನಾಡಲ್ಲಿ ನಮ್ಮ ಸಂಪ್ರದಾಯಗಳ ಪಾಲನೆ ಹಾಗೂ ರಕ್ಷಣೆಗೆ ಒತ್ತು ಕೊಡಬೇಕೇ ಹೊರತು, ಮರಾಠ ಅಭಿವೃದ್ಧಿಗಲ್ಲ ಎಂದ ಪ್ರತಿಭಟನಾ ಕಾರರು, ತಕ್ಷಣವೇ ನಿಗಮವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು. ಸರ್ಕಾರ ಮರಾಠ ಅಭಿವೃದ್ಧಿ ನಿಗಮವನ್ನು ರದ್ದುಗೊಳಿಸದಿದ್ದಲ್ಲಿ ಜ.31ರಂದು ರಾಜ್ಯಾದ್ಯಂತ ರೈಲು ತಡೆ ಚಳುವಳಿ ಮಾಡಬೇಕಾಗುತ್ತದೆ ಎಂದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ, ಕೆ.ಎಸ್.ಶಿವರಾಮು, ಬಾಲಕೃಷ್ಣ, ಪಿ.ಸಿ.ನಾಗರಾಜು, ಸಿದ್ದಲಿಂಗಪ್ಪ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.