ಮಹಾರಾಜ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

ಮೈಸೂರು, ಮಾ.2(ಎಸ್‍ಬಿಡಿ)-ಮೈಸೂರಿನ ಮಹಾರಾಜ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳು ಮೂಲ ಸೌಕರ್ಯಕ್ಕೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ರಾಮಸ್ವಾಮಿ ವೃತ್ತ- ಅಗ್ನಿಶಾಮಕ ಠಾಣೆ ರಸ್ತೆಯಲ್ಲಿರುವ ಹಾಸ್ಟೆಲ್ ಆವರಣದಲ್ಲಿ ಜಮಾವಣೆಗೊಂಡ ವಿದ್ಯಾರ್ಥಿಗಳು ಶೌಚಾಲಯ, ಸ್ನಾನದ ಕೊಠಡಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇನ್ನಿತರ ಮೂಲ ಸೌಕರ್ಯವನ್ನು ಸಮರ್ಪಕ ವಾಗಿ ಕಲ್ಪಿಸುವಂತೆ ಆಗ್ರಹಿಸಿದರು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೆರಳೆಣಿಕೆಯಷ್ಟು ಶೌಚಾಲಯ ಹಾಗೂ ಸ್ನಾನದ ಕೊಠಡಿಗಳಿವೆ. ಅದರಲ್ಲೂ ಕೆಲವು ಕೊಠಡಿಗಳ ಬಾಗಿಲು ಮುರಿದು ಬಿದ್ದಿವೆ, ನಲ್ಲಿಗಳೂ ಇಲ್ಲ. ಕುಡಿಯಲು ಶುದ್ಧ ನೀರಿಲ್ಲ. ಆಹಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ನಿತ್ಯವೂ ಪೌಷ್ಠಿಕಾಂಶವಿಲ್ಲದ ಒಂದೇ ರೀತಿಯ ಆಹಾರ ನೀಡು ತ್ತಾರೆ. ನಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ಹೇಳಿಕೊಂಡರೆ ಸ್ಪಂದಿಸುವುದಿಲ್ಲ ಎಂದು ಅಳಲು ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಲಯಕ್ಕೆ ಸಂಬಂಧಪಡದ ವಿಷಯ ಗಳಿಗೆ ಸ್ಥಳೀಯ ಯುವಕರು ಆಗಾಗ ಹಾಸ್ಟೆಲ್‍ಗೆ ನುಗ್ಗಿ, ಅಮಾಯಕರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸಿಸಿಟಿವಿ ಅಳವಡಿಸುವುದರ ಜೊತೆಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಆಗ್ರಹಿಸಿದರು.