ರಥಸಪ್ತಮಿ ಪ್ರಯುಕ್ತ ಸಾಮೂಹಿಕ 108 ಸೂರ್ಯ ನಮಸ್ಕಾರ

ಮೈಸೂರು: ರಥಸಪ್ತಮಿ ಹಾಗೂ ಮೈಸೂರು ಯೋಗ ಒಕ್ಕೂಟದ 18ನೇ ವಾರ್ಷಿಕೋತ್ಸವದ ಅಂಗವಾಗಿ ಮೈಸೂರು ಅರಮನೆ ಕೋಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಮಂಗಳವಾರ ನೂರಾರು ಯೋಗಪಟುಗಳು ಸಾಮೂಹಿಕ 108 ಸೂರ್ಯ ನಮಸ್ಕಾರ ಮಾಡಿದರು.

ಮುಂಜಾನೆ 5.45 ಗಂಟೆಗೆ ಸರಿಯಾಗಿ ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಬಿ.ಪಿ.ಮೂರ್ತಿ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು. ಯೋಗಪಟುಗಳು ಸೂಂiÀರ್i ಮಂತ್ರದೊಂದಿಗೆ 108 ಬಾರಿ ಸೂರ್ಯ ನಮಸ್ಕಾರ ನೆರವೇರಿಸಿದರು. ಇದೇ ವೇಳೆ ಪೂರ್ವದಲ್ಲಿ ಉದಯಿಸಿದ ಸೂರ್ಯ ಯೋಗ ಪಟುಗಳಿಗೆ ಆಶೀರ್ವದಿಸಿದಂತಿತ್ತು. 2 ತಾಸುಗಳ ಕಾಲ ನಡೆದ ಸೂರ್ಯ ನಮಸ್ಕಾರ ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಭಾಗವಹಿಸಿದ್ದ ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಅವರು ಮಾತನಾಡಿ, ಯೋಗದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಮೈಸೂರು ವಿವಿಯಲ್ಲಿ ಯೋಗ ಕೋರ್ಸ್ ತೆರೆಯಲು ಚಿಂತಿಸಲಾಗಿದೆ ಎಂದರು. ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಜಿಎಸ್‍ಎಸ್ ಯೋಗಿಕ್ ಫೌಂಡೇಷನ್‍ನ ಶ್ರೀಹರಿ, ಆಯುಷ್ ಇಲಾಖೆ ಅಧಿಕಾರಿ ಡಾ.ಸೀತಾಲಕ್ಷ್ಮಿ, ಮೈಸೂರು ಯೋಗ ಒಕ್ಕೂಟದ ಡಾ.ಬಿ.ಪಿ.ಮೂರ್ತಿ, ಬಾಬಾ ರಾಮ್‍ದೇವ್ ಪತಂಜಲಿ ಯೋಗ ಸಮಿತಿ ಅಧ್ಯಕ್ಷರಾದ ರತ್ನಾರಾವ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ.ಎ.ಎಸ್.ಚಂದ್ರಶೇಖರ್, ಪದಾಧಿಕಾರಿಗಳಾದ ಟಿ.ಜಲೇಂದ್ರಕುಮಾರ್, ಬಿ.ಶಾಂತಾರಾಂ, ಎಂ.ಎಸ್.ರಮೇಶ್‍ಕುಮಾರ್, ಯೋಗ ಕುಮಾರ್, ಕೆ.ಜಿ.ದೇವರಾಜು ಉಪಸ್ಥಿತರಿದ್ದರು.