ರಾಮಾಪುರ ಪ್ರೌಢ ಶಾಲೆಯಲ್ಲಿ ಕಿಡಿಗೇಡಿಗಳ ದಾಂಧಲೆ

ಹನೂರು:  ಸಮೀ ಪದ ರಾಮಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬಾಗಿಲು ಮುರಿದು ಕೊಠಡಿಯಲ್ಲಿದ್ದ ಪೀಠೋಪಕರಣ ಹಾಗೂ ಇತರ ಉಪಕರಣಗಳನ್ನು ಕಿಡಿಗೇಡಿಗಳು ನಾಶ ಪಡಿಸಿರುವ ಘಟನೆ ನಡೆದಿದೆ.

ಶನಿವಾರ ರಾತ್ರಿ ಶಾಲೆಯ ಕಬ್ಬಿಣದ ಗೇಟ್ ಮತ್ತು ಮರದ ಎರಡು ಕೊಠಡಿಗಳ ಬಾಗಿಲು ಮುರಿದು ಮುಖ್ಯ ಶಿಕ್ಷಕರ ಕೊಠಡಿ ಹಾಗೂ ಸಿಬ್ಬಂದಿಗಳ ಕೊಠಡಿಯಲ್ಲಿರುವ ಪೀಠೋಪಕರಣಗಳು ಸೇರಿದಂತೆ ರೇಡಿಯೋ, ಟಿವಿ, ಕಿಟಕಿ, ಬಾಗಿಲು ಸೇರಿದಂತೆ ಲಕ್ಷಾಂತರ ಬೆಲೆ ಬಾಳುವ ಉಪಕರಣಗಳನ್ನು ನಾಶಪಡಿಸಿದ್ದಾರೆ.

ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಂಡ ಭೇಟಿ ನೀಡಿ ಶಾಲೆ ಸುತ್ತಮುತ್ತಲಿನ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಕ್ತ ಕಲೆಯ ಹೆಜ್ಜೆ ಗುರುತು ಕಂಡು ಬಂದಿವೆ. ಕಿಡಿಗೇಡಿಗಳು ರಾತ್ರಿ ವೇಳೆಯಲ್ಲಿ ಶಾಲೆಗೆ ಅಕ್ರಮವಾಗಿ ಪ್ರವೇಶ ಮಾಡಿ, ಎರಡು ಕೊಠಡಿಗಳ ಬಾಗಿಲು ಮುರಿದು ಟಿ.ವಿ. ರೇಡಿಯೋ ಸೇರಿದಂತೆ ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳನ್ನು ನಾಶಪಡಿಸಿದ್ದಾರೆ. ಈ ಸಂಬಂಧ ಪ್ರೌಢಶಾಲೆಯ ಸಹಶಿಕ್ಷಕ ಪ್ರದೀಪ್ ರಾಮಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.