ಶ್ರೀರಂಗಪಟ್ಟಣದಲ್ಲಿ ಹಾಡಹಗಲೇ ಪುಡಿರೌಡಿಗಳ ಹಟ್ಟಹಾಸ

ಮಂಡ್ಯ:  ಹಾಡಹಗಲೇ ಪುಡಿರೌಡಿಗಳ ತಂಡವೊಂದು ರಾಡು, ಲಾಂಗ್, ಬಾಟಲಿಗಳನ್ನಿಡಿದು ದಾಳಿ ಮಾಡಿ ಮೂವರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

ಭರತ್, ಚಂದ್ರು, ಸತ್ಯನಾರಾಯಣ ಎಂಬುವವರೇ ತೀವ್ರ ಗಾಯಗೊಂಡವರು.

ಹಿನ್ನೆಲೆ: ಪಟ್ಟಣದ ಮುಖ್ಯರಸ್ತೆಯ ಕೋಟೆದ್ವಾರದ ಎದುರಿನ ಮೀನಿನ ಅಂಗಡಿ ಯಲ್ಲಿ ಕೆಲಸ ಮಾಡುತ್ತಿದ್ದ ಮೂವರ ಮೇಲೆ ದುಷ್ಕರ್ಮಿಗಳು ದಿಢೀರ್ ದಾಳಿ ನಡೆಸಿ ಮೀನಿನ ಅಂಗಡಿಯೊಳಗಿದ್ದ ರವಿ ಅವರ ಮಗ ಭರತ್‍ನಿಗೆ ರಾಡಿನಿಂದ ಹೊಡೆದು ಬಾಟಲಿಯಿಂದ ಚುಚ್ಚಿದ್ದಾರೆ. ತಪ್ಪಿಸಿಕೊಳ್ಳಲು ಓಡುತ್ತಿದ್ದ ಮತ್ತೊಬ್ಬ ರಾಮಚಂದ್ರ ಅವರ ಮಗ ಚಂದ್ರು ಎಂಬಾತನನ್ನು ಬೈಕ್‍ನಲ್ಲಿ ಓಡಿಸಿಕೊಂಡು ಹೋಗಿ ಹೊಡೆದು ಗಾಯಗೊಳಿಸಿದ್ದಾರೆ. ಇವರ ಜತೆಯಲ್ಲಿಯೇ ಇದ್ದ ಚಲುವ ರಾಜು ಅವರ ಮಗ ಸತ್ಯನಾರಾಯಣನ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿ ದ್ದಾರೆ ಎನ್ನಲಾಗಿದೆ. ಮೂವರಿಗೂ ಗಂಭೀರ ಸ್ವರೂಪದ ಗಾಯವಾಗಿದ್ದು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಏಕಾಏಕಿ ದಾಳಿ ಮಾಡಿ ಹಲ್ಲೆ ಮಾಡಿದ ದುಷ್ಕರ್ಮಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಾಡ ಹಗಲೇ ರಸ್ತೆಯಲ್ಲಿ ನಡೆದ ಈ ಘಟನೆ ಯಿಂದ ಪಟ್ಟಣದ ಜನರು ಭಯ ಭೀತರಾಗಿದ್ದಾರೆ.