ಹಿರಿಯ ವಿದ್ವಾಂಸ, ವಿಜ್ಞಾನಿ ಮೈಸೂರಿನ ಎನ್.ಎಸ್.ರಾಜಾರಾಂ ಇನ್ನಿಲ್ಲ

ಬೆಂಗಳೂರು, ಡಿ.11- ಅಮೆರಿಕದ ಹೆಸರಾಂತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ನಾಸಾ’ದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದ ಹಿರಿಯ ವಿದ್ವಾಂಸರೂ ಆಗಿದ್ದ ಮೈಸೂರು ಮೂಲದ ಡಾ.ನವರತ್ನ ಶ್ರೀನಿವಾಸ ರಾಜಾರಾಮ್(76) ಬೆಂಗ ಳೂರಿನಲ್ಲಿ ಬುಧವಾರ ನಿಧನರಾದರು.

ಮೈಸೂರಿನಲ್ಲಿ 1943ರಲ್ಲಿ ಜನಿಸಿದ್ದ ರಾಜಾರಾಮ್ ಖ್ಯಾತ ಸಾಹಿತಿ ದಿ.ನವರತ್ನ ರಾಮರಾಯರ ಮೊಮ್ಮಗ. ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಪಿಎಚ್‍ಡಿ ಪದವಿ ಪಡೆದಿದ್ದ ರಾಜಾರಾಮ್, 2 ದಶಕಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಭಾರತದ ಮೂಲನಿವಾಸಿಗಳು ಆರ್ಯರಲ್ಲ ಎಂಬ ವಾದವನ್ನು ಒಪ್ಪಿಕೊಂಡಿದ್ದ ಅವರು, ಅದಕ್ಕೆ ತಮ್ಮ ಸಂಶೋಧನೆಗಳ ಮೂಲಕ ಆಧಾರಗಳನ್ನೂ ಒದಗಿಸಿದ್ದರು. ಉತ್ತರ ಕರ್ನಾಟಕ ದೇಶಸ್ಥ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ಇವರ ಕುಟುಂಬಿಕರು ಒಂದೇ ತಲೆ ಮಾರಿನಲ್ಲಿ ಒಂಬತ್ತು ವಿದ್ವಾಂಸರನ್ನು ಹೊಂದಿದ್ದರು. ಹಾಗಾಗಿ ಇವರ ಕುಟುಂಬ ದವರ ಹೆಸರಿಗೆ `ನವರತ್ನ’ ಎಂಬ ವಿಶೇಷಣ ಸೇರಿಕೊಂಡಿತ್ತು. ನಾಸಾದಲ್ಲಿ ಕೆಲ ಸಮಯ ವಿಜ್ಞಾನಿಯಾಗಿ ಕೆಲಸ ಮಾಡಿದ್ದ ರಾಜಾರಾಮ್ ಬಳಿಕ ಭಾರತೀಯ ಇತಿಹಾಸ, ಸಂಸ್ಕೃತಿ, ರಾಷ್ಟ್ರಚಿಂತನೆಗಳ ಕುರಿತು ಒಲವು ತೋರಿದ್ದರು. ಈ ಸಂಬಂಧ ಅವರು ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

1900ರ ವರ್ಷದಲ್ಲಿ ಅಮಲ್ದಾರರಾಗಿ ನೇಮಕಗೊಂಡಿದ್ದ ರಾಜಾರಾಮ್ ಅವರ ಅಜ್ಜ ನವರತ್ನ ರಾಮರಾಯರು, ಮೈಸೂರು ಮಹಾರಾಜರ ಕಾಲದಲ್ಲಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಇವರ ಕಾಲದಲ್ಲೇ ರಾಜ್ಯದಲ್ಲಿ ರೇಷ್ಮೆ ಉದ್ಯಮ ಸ್ಥಾಪಿಸಲು ಸಾಧ್ಯವಾಗಿದ್ದು. ನವರತ್ನ ರಾಮರಾಯರ ಕುಟುಂಬ ಮೈಸೂ ರಿನಲ್ಲಿ ಹಲವು ದಶಕಗಳ ಕಾಲ ವಾಸವಿತ್ತು. ಈ ವೇಳೆ ಮೈಸೂರಿನಲ್ಲೇ ಜನಿಸಿದ್ದ ನವರತ್ನ ರಾಜಾರಾಮ್, ಪ್ರಾಥಮಿಕ ವಿದ್ಯಾಭ್ಯಾಸವನ್ನು ಇಲ್ಲೇ ಮಾಡಿದ್ದರು.