ರಮ್ಮನಹಳ್ಳಿಯಲ್ಲಿ ಶ್ರೀಲಕ್ಷ್ಮಿದೇವಿ ಅದ್ಧೂರಿ ಜಾತ್ರೆ; ಜಿಟಿಡಿ ಭಾಗಿ

ಮೈಸೂರು,ಮಾ.14(ಎಂಕೆ)- ಮೈಸೂರು ತಾಲೂಕಿನ ರಮ್ಮನಹಳ್ಳಿಯಲ್ಲಿ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವ, ಮಾರಮ್ಮನ ಹಬ್ಬದ ಆಚರಣೆ ಸಂಭ್ರಮದಿಂದ ನೆರವೇರಿತು.

ಪ್ರತಿ 3 ವರ್ಷಗಳಿಗೊಮ್ಮೆ 15 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಹಂಚ್ಯಾ, ಸಾತಗಳ್ಳಿ ಗ್ರಾಮಗಳಲ್ಲಿ ಜಾತ್ರೆ ಶುಕ್ರವಾರ ನಡೆದ ಬಳಿಕ ಶನಿವಾರ ರಮ್ಮನಹಳ್ಳಿ ಗ್ರಾಮದಲ್ಲಿ ಲಕ್ಷ್ಮಿ ದೇವಿ ಜಾತ್ರೆ ನಡೆಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಸಾವಿ ರಾರು ಭಕ್ತರು ಭಾಗವಹಿಸಿದ್ದರು.

ಬಳಿಕ ಮಾರಮ್ಮ ದೇವಸ್ಥಾನದ ಸುತ್ತ ಕಟ್ಟಲಾ ಗಿದ್ದ ರಂಗದಲ್ಲಿ ನೂರಾರು ಪುರುಷರು ದೊಣ್ಣೆ ಕುಣಿತ ನಡೆಸಿದರೆ, ಕೆಲವರು ಸೀರೆಯುಟ್ಟು ಕುಣಿದು ಸಂಭ್ರಮಿಸಿದರು. ಕೆಲ ವ್ಯಕ್ತಿಗಳು ಮಾರಮ್ಮ, ಕಾಳಿ, ವಿದೇಶಿ ಮಹಿಳೆ, ಅಪಘಾತಕ್ಕೀಡಾದ ವ್ಯಕ್ತಿ, ರಾಜ-ಮಹಾರಾಜರು, ಕ್ರಿಕೆಟರ್, ಗಣಪತಿ ಮತ್ತಿತರ ವೇಷಗಳನ್ನು ತೊಟ್ಟು ಮಾರಮ್ಮನ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿದರು. ಮಹಿಳೆಯರೆಲ್ಲರೂ ಪ್ರೇಕ್ಷಕರಾಗಿದ್ದರು.

ಶಿವರಾತ್ರಿ ನಂತರದ 12ನೇ ದಿನಕ್ಕೆ ಬರುವ ಶುಕ್ರವಾರ ಸಂಪ್ರದಾಯದಂತೆ ರಮ್ಮನಹಳ್ಳಿಯಲ್ಲಿ ಅಂತಿಮ ಜಾತ್ರೆ ನಡೆಯಿತು. ಮಾ.15ರಂದು ಗ್ರಾಮದ ಕೊಳದಲ್ಲಿ ಮಹಿಳೆಯರು ಮತ್ತು ಮಕ್ಕಳು ಮಿಂದ ಬಳಿಕ ಬಾಯಿ ಬೀಗ ಹಾಕಲಾ ಗುವುದು. ಕೊನೆಗೆ ಪ್ರಧಾನ ಅರ್ಚಕರಿಗೆ ಕರಗ ಹೊರಿಸಿ ಪೂಜೆ ಸಲ್ಲಿಸಲಾಗುವುದು.

ಜಾತ್ರಾ ಸಂದರ್ಭದಲ್ಲಿ ಗ್ರಾಮದಲ್ಲಿ ಯಾರೂ ಸಹ ಖಾರದಪುಡಿ ಮಾಡಿಸುವಂತಿಲ್ಲ. ಸಾಂಬಾ ರಿಗೆ ಒಗ್ಗರಣೆ ಹಾಕುವಂತಿಲ್ಲ. ಅಲ್ಲದೆ ಗ್ರಾಮ ದಲ್ಲಿ ಅಷ್ಟೂ ದಿನ ಮಾಂಸಾಹಾರ ಸೇವಿಸದಂತೆ ಆಚರಣೆ ಮಾಡುವುದು ವಿಶೇಷ.

ಜಿಟಿಡಿಗೆ ಸನ್ಮಾನ: ಲಕ್ಷ್ಮಿದೇವಿ ಜಾತ್ರಾ ಉತ್ಸವದ ಹಿನ್ನೆಲೆ ರಮ್ಮನಹಳ್ಳಿಗೆ ಆಗಮಿಸಿದ ಶಾಸಕ ಜಿ.ಟಿ. ದೇವೇಗೌಡ ಅವರನ್ನು ಗ್ರಾಮಸ್ಥರು ಸನ್ಮಾನಿಸಿ ದರು. ಜಾತ್ರೆಯಲ್ಲಿ ಭಾಗವಹಿಸಿದ ಜಿಟಿಡಿ, ಗ್ರಾಮ ಮತ್ತು ಗ್ರಾಮಸ್ಥರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ, ಜಿಪಂ ಸದಸ್ಯ ದಿನೇಶ್, ಗ್ರಾಪಂ ಅಧ್ಯಕ್ಷ ನಾಗರಾಜು, ಮಾಜಿ ಗ್ರಾಪಂ ಅಧ್ಯಕ್ಷ ನಾಗರಾಜು ಮತ್ತಿತರರು ಜಾತ್ರೆಯಲ್ಲಿ ಭಾಗವಹಿಸಿದ್ದರು.