ದಸರಾ ಗಜಪಡೆ ಮಾವುತರು, ಕಾವಾಡಿಗಳ ಕುಟುಂಬಕ್ಕೆ ಭರ್ಜರಿ ಭೋಜನ ವ್ಯವಸ್ಥೆ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧ ಶಿಬಿರಗಳಿಂದ ಆಗಮಿಸಿರುವ ಗಜಪಡೆಯ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬದ ಸದಸ್ಯರಿಗೆ ಶುಕ್ರವಾರ ಅರಮನೆಯ ಆಡಳಿತ ಮಂಡಳಿ ವತಿಯಿಂದ ಭೋಜನದ ವ್ಯವಸ್ಥೆ ಮಾಡಿ, ಮಕ್ಕಳಿಗೆ ಆಟಿಕೆಗಳನ್ನು ವಿತರಿಸಲಾಯಿತು.

ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ 12 ಆನೆಗಳೊಂದಿಗೆ ಅರ ಮನೆಯ ಅಂಗಳಕ್ಕೆ ಬಂದು ಬೀಡುಬಿಟ್ಟಿರುವ ಆನೆಗಳ ಮಾವುತರು, ಕಾವಾಡಿ ಗಳು, ವಿಶೇಷ ಮಾವುತರು ಹಾಗೂ ಅವರ ಕುಟುಂಬ ಸದಸ್ಯರಿಗೆ ಭೋಜನ ವ್ಯವಸ್ಥೆ ಮಾಡುವ ಮೂಲಕ ಸತ್ಕರಿಸುವ ಸಂಪ್ರದಾಯವಿದ್ದು, ಇಂದು ಮಧ್ಯಾಹ್ನ ಅರಮನೆಯ ಆವರಣದಲ್ಲಿರುವ ತ್ರಿನೇಶ್ವರ ಸ್ವಾಮಿ ದೇವಾಲಯದ ಸಮೀಪ ವಿರುವ ಅಂಗಳದಲ್ಲಿ ಅರಮನೆ ಆಡಳಿತ ಮಂಡಳಿ ಆಯೋಜಿಸಿದ್ದ ಭೋಜನ ಕೂಟವನ್ನು ಮೈಸೂರು ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇಗೌಡರು ಮಾವುತರಿಗೆ ಊಟ ಬಡಿಸುವ ಮೂಲಕ, ಚಾಲನೆ ನೀಡಿದರು.

ಮೆನು: ದಸರಾ ಆನೆಗಳ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬ ಸದಸ್ಯರಿಗಾಗಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಕರ್ಜೂರ ಪಾಯಸ, ಬೇಳೆ ಹೋಳಿಗೆ, ತುಪ್ಪ, ಅಕ್ಕಿ ರೊಟ್ಟಿ ಎಣ್ಣೆ ಗಾಯ್, ಚಟ್ನಿ, ಮೆಂತ್ಯಬಾತ್, ಮೊಸರು ಚಟ್ನಿ, ಹುರುಳಿಕಾಳು-ಸೊಪ್ಪಿನ ಪಲ್ಯ, ಬೀನೀಸ್-ಕ್ಯಾರೆಟ್ ಪಲ್ಯ, ಸ್ವೀಟ್ ಕಾರ್ನ್, ದಾಳಿಂಬೆ ಕೋಸಂಬರಿ, ಪುಡಿ ಪಕೋಡ, ಅನ್ನ, ಹುರುಳಿ ಕಟ್ಟು, ರಸಂ, ಮೊಸರು, ಹಪ್ಪಳ, ಉಪ್ಪಿನಕಾಯಿ, ಬಾಳೆಹಣ್ಣು, ಬೀಡವನ್ನು ನೀಡುವ ಮೂಲಕ ಸತ್ಕರಿಸಲಾಯಿತು.

ಆಟಿಕೆಗಳ ವಿತರಣೆ: ಭೋಜನದೊಂದಿಗೆ ಮಾವುತರು ಮತ್ತು ಕಾವಾಡಿಗಳ ಮಕ್ಕಳಿಗೆ ಆಟಿಕೆಗಳನ್ನು ವಿತರಿಸಲಾಯಿತು. ಚಿಕ್ಕ ಚಿಕ್ಕ ಮಕ್ಕಳಿಗೆ ಗೊಂಬೆಗಳು, ಆಟಿಕೆ ವಾಹನಗಳು, ಸ್ಕಿಪ್ಪಿಂಗ್, ರಿಂಗ್, ವಾಲಿಬಾಲ್, ನೆಟ್, ಕ್ರಿಕೆಟ್ ಬ್ಯಾಟ್, ವಿಕೆಟ್, ಬಾಲ್, ಕೇರಂ ಬೋರ್ಡ್, ಚೆಸ್ ಬೋರ್ಡ್ ಸೇರಿದಂತೆ ಇನ್ನಿತರ ಆಟಿಕೆಗಳನ್ನು ನೀಡಲಾಯಿತು.

ಗಣ್ಯರು: ಭೋಜನ ಕೂಟದಲ್ಲಿ ಸಚಿವ ಜಿ.ಟಿ.ದೇವೇಗೌಡ ಅವರೊಂದಿಗೆ ಶಾಸ ಕರುಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ, ಜಿಲ್ಲಾ ಧಿಕಾರಿ ಅಭಿರಾಮ್ ಜಿ.ಶಂಕರ್, ಸಿಸಿಎಫ್ ವೆಂಕಟೇಸನ್, ಡಿಸಿಎಫ್ ಸಿದ್ರಾಮಪ್ಪ ಚಳ್ಕಾಪುರೆ, ಜಿ.ಪಂ ಸಿಇಒ ಕೆ.ಜ್ಯೋತಿ, ಅರಮನೆ ಮಂಡಳಿಯ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಆರ್‍ಎಫ್‍ಒ ಅನನ್ಯಕುಮಾರ್, ಪಶುವೈಧ್ಯ ಡಾ.ಡಿ.ಎನ್.ನಾಗರಾಜು ಸಿಬ್ಬಂದಿಗಳಾದ ಕುಮಾರ್, ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು