ಸರ್ಜಿಕಲ್ ಆಪರೇಷನ್ ಅವಶ್ಯ: ಹೆಚ್‍ಡಿಕೆ

ಹಾಸನ: ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಸರ್ಜಿಕಲ್ ಆಪರೇಷನ್ ಅವಶ್ಯವಾಗಿತ್ತು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ರಕ್ಷಣಾ ಇಲಾಖೆಯಿಂದ ಸರ್ಜಿಕಲ್ ಆಪರೇಷನ್ ಮಾಡಿರುವ ಬಗ್ಗೆ ನಾನು ಮಧ್ಯೆ ಪ್ರವೇಶ ಮಾಡುವುದಿಲ್ಲ. ಇದಕ್ಕೆ ದೇಶದ ಒಮ್ಮತದ ಅಭಿಪ್ರಾಯವಿದೆ. ಈ ಬಗ್ಗೆ ನಾನು ಚರ್ಚೆ ಮಾಡುವುದು ಸೂಕ್ತ ಅಲ್ಲ. ಇಂದಿನ ಸೇನೆಯ ಸರ್ಜಿಕಲ್ ಆಪರೇಷನ್ ಅವಶ್ಯವಾಗಿತ್ತು ಎಂದರು.

ಸೀಟು ಹಂಚಿಕೆಯಲ್ಲಿ ಗೊಂದಲವಿಲ್ಲ: ಲೋಕಸಭೆ ಸೀಟು ಹೊಂದಾಣಿಕೆ ಪಕ್ಷದ ನಾಯಕ ರಿಗೆ ಚರ್ಚೆ ಮಾಡಲು ಬಿಡಲಾಗಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಒಮ್ಮತದ ತೀರ್ಮಾನವಾಗುವ ವಿಶ್ವಾಸವಿದೆ. ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ, ಕಾಂಗ್ರೆಸ್‍ನ ರಾಜ್ಯ ನಾಯಕರು ಹಾಗೂ ರಾಹುಲ್‍ಗಾಂಧಿ ಜೊತೆ ಚರ್ಚೆ ನಡೆಯುತ್ತಿದೆ. ನಾನು ಅಗತ್ಯ ಸಂದರ್ಭದಲ್ಲಿ ಚರ್ಚೆಯಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದರು.

ಕಾಡ್ಗಿಚ್ಚು ತಹಬದಿಗೆ: ಎಲ್ಲಾ ಕಡೆ ಬೆಂಕಿ ತಹಬದಿಗೆ ಬಂದಿದೆ. ಬಂಡೀಪುರದಲ್ಲಿ ಹೆಲಿಕಾಪ್ಟರ್ ಬಳಸಿ ಬೆಂಕಿ ನಂದಿಸಲಾಗಿದೆ. ಈ ವಿಚಾರದಲ್ಲಿ ಆತಂಕ ಹುಟ್ಟಿಸುವ ಸನ್ನಿವೇಶ ಬೇಡ. ಇದು ಪ್ರಕೃತಿ ಸಹಜ. ಇದರಲ್ಲಿ ಸರ್ಕಾರದ ಲೋಪವಿಲ್ಲ, ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಿದ್ದಾರೆ ಎಂದರು.

ಪ್ರಧಾನಿ ಮೋದಿ ಅವರು ಪೌರಕಾರ್ಮಿಕರ ಪಾದ ತೊಳೆದ ವಿಚಾರ. ಜನರ ಮನಗೆಲ್ಲಲು ಏನು ಬೇಕಾದರೂ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.