ಅನುಮಾನಾಸ್ಪದವಾಗಿ ಯುವತಿ ಸಾವು

ಮಂಡ್ಯ: ಪ್ರೀತಿಸಿ ಮದುವೆ ಯಾಗಿದ್ದ ಯುವತಿ ನೇಣು ಬಿಗಿದು ಕೊಂಡು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ನಡೆದಿದೆ.

ಸುಕನ್ಯಾ(19) ಮೃತ ಯುವತಿ. ಹೆಬ್ಬಕವಾಡಿ ಗ್ರಾಮದವರೇ ಆದ ಸುಕನ್ಯಾ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಸುಜೇಂದ್ರ ಪರಿಚಯವಾಗಿದ್ದು, ಇಬ್ಬರು ಪರಸ್ಪರ ಎರಡು ವರ್ಷದಿಂದ ಪ್ರೀತಿಸುತ್ತಿ ದ್ದರು. ಆದರೆ, ಇಬ್ಬರ ಮನೆಯಲ್ಲೂ ಮದುವೆಗೆ ವಿರೋಧವಿತ್ತು. ಪೋಷಕರ ವಿರೋಧದ ನಡುವೆಯೂ ಮೂರು ತಿಂಗಳ ಹಿಂದೆ ಸುಕನ್ಯಾ ಮತ್ತು ಸುಜೇಂದ್ರ ಕುಣಿಗಲ್‍ನ ದೇವಸ್ಥಾನವೊಂದರಲ್ಲಿ ಮದುವೆಯಾಗಿ ದ್ದರು. ಮದುವೆಯ ನಂತರ ಸುಕನ್ಯಾ ಹೆಬ್ಬಕವಾಡಿಯಲ್ಲಿಯೇ ಹುಡುಗನ ಮನೆಯಲ್ಲಿ ವಾಸವಾಗಿದ್ದಳು.

ಭಾನುವಾರ ಹುಡುಗನ ಮನೆಯಲ್ಲಿ ಸುಕನ್ಯಾ ನೇಣು ಬಿಗಿದ ಸ್ಥಿತಿಯಲ್ಲಿ ಒದ್ದಾಡುತ್ತಿದ್ದನ್ನು ಪತಿಯ ಮನೆಯವರು ನೋಡಿದ್ದಾರೆ. ಕೂಡಲೇ ಸುಕನ್ಯಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಕನ್ಯಾ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಪತಿಯ ಮನೆಯವರೇ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಸುಕನ್ಯಾ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.