ಮನೆಗಳ್ಳತನಕ್ಕೆ ಯತ್ನಿಸಿದ ಯುವಕನ ಬಂಧನ

ಕೊಳ್ಳೇಗಾಲ: ಗಣೇಶ ಹಬ್ಬದ ತಯಾರಿಯಲ್ಲಿದ್ದ ಮನೆಯೊಳಗೆ ಮುಖವಾಡ ಧರಿಸಿ ಸಿನಿಮೀಯ ರೀತಿಯಲ್ಲಿ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದ ಯುವಕ ಪೊಲೀಸರ ಅತಿಥಿಯಾಗಿರುವ ಘಟನೆ ಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ.

ಪಟ್ಟಣದ ಬಸ್ತೀಪುರ ಬಡಾವಣೆಯ ನಿವಾಸಿ ರಘು ಎಂಬಾತ ಪೊಲೀಸರ ಅತಿಥಿ ಯಾದ ಆರೋಪಿ. ಆರೋಪಿಯು ವಾಸವಿ ಮಹಲ್ ರಸ್ತೆಯಲ್ಲಿರುವ ಚೇತನ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದ. ಗುರುವಾರ ಬೆಳಿಗ್ಗೆ ಸಮಯದಲ್ಲಿ ಮುಖವಾಡ ಧರಿಸಿ ವಾಸವಿ ಮಹಲ್ ರಸ್ತೆಯಲ್ಲಿರುವ ಮನೆಯೊಳಗೆ ನುಗ್ಗಿದ್ದ ಮನೆಯಲ್ಲಿದ್ದ ಚೇತನ್ ರವರ ಪತ್ನಿ ಶ್ರೀದೇವಿರವರಿಗೆ ಚಾಕು ತೊರಿಸಿ ಸರ ಕೊಡುವಂತೆ ಹೆದರಿಸಿದ್ದಾನೆ. ತಕ್ಷಣ ಮನೆಯಲ್ಲಿದ್ದವರು ಕೂಗಿಕೊಂಡಾಗ ಅಕ್ಕಪಕ್ಕದಲ್ಲಿದ್ದ ಜನರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ಸಂಬಂಧ ಪಟ್ಟಣ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.