ಗಣಪತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಕುಶಾಲನಗರ: ಗಣೇಶ ಮೂರ್ತಿ ವಿಸರ್ಜನೆ ಸಂದರ್ಭ ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೊರ್ವ ಮೃತಪಟ್ಟಿರುವ ಘಟನೆ ಗುರುವಾರ ಸಿದ್ಧಲಿಂಗಪುರ ಬಳಿಯ ಅರಶಿನಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಸಿದ್ದಲಿಂಗಪುರ ಗ್ರಾಮದ ಅನಂತ ಕುಮಾರ್ ಹಾಗೂ ಪದ್ಮ ದಂಪತಿಯ ಎರಡನೇ ಪುತ್ರ ಹೇಮಂತ್ (13) ಮೃತಪಟ್ಟ ದುರ್ದೈವಿ. ಈತ ಸಿದ್ಧಲಿಂಗಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಗ್ರಾಮದಲ್ಲಿ ಬಾಲಕರ ತಂಡ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿನಿಯೋಗಿದ ಬಳಿಕ ವಿಸರ್ಜನೆಗಾಗಿ ಸಿದ್ಧಲಿಂಗಪುರದ ಬಿದಿರುಕಟ್ಟೆ ಕೆರೆಗೆ ಗುರುವಾರ ಮಧ್ಯಾಹ್ನ ಹನ್ನೇರಡು ಮಂದಿ ಬಾಲಕರ ತಂಡ ತೆರಳಿದೆ. ಈ ಸಂದರ್ಭ ಗಣೇಶ ವಿಸರ್ಜನೆಗೆಂದು ಕೆರೆಗೆ ಇಳಿದ ವೇಳೆ ಹೇಮಂತ್ ನೀರಿನಲ್ಲಿ ಮುಳುಗಿದ್ದಾನೆ. ಆದರೆ ಇತರೆ ಮಕ್ಕಳು ಎಲ್ಲರೂ ಸಮಕಾಲೀನರಾದ ಕಾರಣ ರಕ್ಷಿಸಲು ಮುಂದಾಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.