ಹೇಮಾವತಿ ನದಿಗೆ ಹಾರಿದ ವ್ಯಕ್ತಿ: ವೀಡಿಯೋ ವೈರಲ್

ಹೊಳೆನರಸೀಪುರ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹೇಮಾವತಿ ನದಿಗೆ ಹಾರಿ ವ್ಯಕ್ತಿಯೋರ್ವ ಈಜಿ ದಡ ಸೇರುವ ಹುಚ್ಚು ಸಾಹಸ ಪ್ರದರ್ಶಿಸಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಟ್ಟಣದ ಕೋಟೆ ಶ್ರೀರಾಮು ಎಂಬಾತ ನದಿಗೆ ಹಾರಿದ ಹುಚ್ಚು ಸಾಹಸಿ. ತನ್ನ ಪುಟಾಣಿ ಮಕ್ಕಳಾದ ಹರ್ಷಗೌಡ, ಧೃವಗೌಡ ಸಮ್ಮುಖದಲ್ಲಿ ನದಿಗೆ ಹಾರಿ ನಂತರ ಈಜಿ ದಡ ಸೇರಿದ್ದಾನೆ. ಮಕ್ಕಳು ಅಪ್ಪ ನದಿಗೆ ಹಾರಬೇಡ ಎಂಬ ಅಳಲನ್ನು ಲೆಕ್ಕಿಸದೆ ಎತ್ತರದ ಸೇತುಯಿಂದ ನದಿಗೆ ಹಾರಿ ನಂತರ ಈಜಿ ದಡ ಸೇರಿದ್ದಾರೆ.

ರಾಮು ಅವರ ಹುಚ್ಚು ಸಾಹಸವನ್ನು ಅನೇಕರು ತಮ್ಮ ಮೊಬೈಲ್‍ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದು, ಈಗ ವೈರಲ್ ಆಗಿದೆ.

ಇವರು ಚಿಕ್ಕಂದಿನಿಂದಲೇ ವಿಷಕಾರಿ ಹಾವುಗಳನ್ನು ಹಿಡಿಯುವ ಮೂಲಕ ಜನಮನ್ನಣೆ ಪಡೆದಿದ್ದರು. ಇಂತಹ ಸಾಹಸಗಳನ್ನು ಹಿಂದಿ ನಿಂದಲೂ ಮುಂದುವರೆಸಿಕೊಂಡು ಬರುತ್ತಿದ್ದಾರೆ.