ಮೈಸೂರಿನ ಶ್ರೀರಾಮಪುರ ಕಸದ ಆಗರ

ರಸ್ತೆಯಲ್ಲೇ ಉಕ್ಕಿ ಹರಿವ ಮ್ಯಾನ್‍ಹೋಲ್-ದುರ್ವಾಸನೆ

ಕಸದ ರಾಶಿಗೆ ಕಿಡಿಗೇಡಿಗಳ ಬೆಂಕಿ-ವಾಯು ಮಾಲಿನ್ಯ

ಮೈಸೂರು,ಮಾ.15(ವೈಡಿಎಸ್)- ಒಂದೆಡೆ ಮುಖ್ಯರಸ್ತೆಯ ಬದಿಯಲ್ಲೇ ಬಿದ್ದಿರುವ ಕಸದ ರಾಶಿ, ಮತ್ತೊಂದೆಡೆ ರಿಂಗ್ ರಸ್ತೆ ಬಳಿಯ ಮ್ಯಾನ್‍ಹೋಲ್ ಉಕ್ಕಿ ಹರಿದು ದುರ್ವಾ ಸನೆ ಬೀರುತ್ತಿದೆ. ಇದು ಶ್ರೀರಾಮಪುರ ವನ್ನು ಬಾಧಿಸುತ್ತಿದ್ದು, ಅನಾರೋಗ್ಯ ಭೀತಿಯೂ ಎದುರಾಗಿದೆ.

ಶ್ರೀರಾಮಪುರ ರಿಂಗ್ ರಸ್ತೆ ಮತ್ತು ಮಾನಂದ ವಾಡಿ ಮುಖ್ಯರಸ್ತೆಯ ಶಿವಪುರದಿಂದ ಶ್ರೀ ರಾಮಪುರದವರೆಗೆ ರಸ್ತೆಯ ಎರಡೂ ಬದಿ ಗಳಲ್ಲೂ ರಾಶಿ ರಾಶಿ ಕಸ ಬಿದ್ದಿದ್ದರೂ ವಿಲೇ ವಾರಿ ಮಾಡುವುದಕ್ಕೆ ಗ್ರಾಪಂ ಮುಂದಾಗಿಲ್ಲ. ಶ್ರೀರಾಮಪುರದಲ್ಲೇ ಗ್ರಾಮ ಪಂಚಾಯಿತಿ ಇದ್ದರೂ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಕಸ ವಿಲೇವಾರಿಯಾಗುತ್ತಿಲ್ಲ.

ಉಕ್ಕಿ ಹರಿಯುವ ಒಳಚರಂಡಿ: ಶ್ರೀರಾಮ ಪುರದಿಂದ ಜೆಪಿ ನಗರವನ್ನು ಸಂಪರ್ಕಿ ಸುವ ರಿಂಗ್ ರಸ್ತೆಯ ಪಿ3 ಮೂಲ ಬಿತ್ತನೆ ತಳಿ ಕೃಷಿಕ್ಷೇತ್ರ, ರಾಷ್ಟ್ರೀಯ ರೇಷ್ಮೆಹುಳು ಬೀಜ ಸಂಘ, ಕೇಂದ್ರ ರೇಷ್ಮೆ ಮಂಡಲಿ ಸಮೀಪದಲ್ಲಿನ ಒಳಚರಂಡಿ ನೀರು ಕಳೆದೆ ರಡು ತಿಂಗಳಿಂದ ಉಕ್ಕಿ ರಸ್ತೆ ಮೇಲೆ ಹರಿಯು ತ್ತಿದೆ. ಈ ಬಗ್ಗೆ ಹಲವು ಬಾರಿ ಶ್ರೀರಾಮ ಪುರ ಗ್ರಾಪಂಗೆ ದೂರು ನೀಡಿದರೂ ಪ್ರಯೋ ಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ರಾಜೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಕಸದ ರಾಶಿ: ನಿವಾಸಿಗಳು ಮನೆಯ ಕಸ ವನ್ನು ಪ್ಲಾಸ್ಟಿಕ್ ಕವರ್‍ಗಳಲ್ಲಿ ತುಂಬಿತಂದು ರಸ್ತೆಯ ಬದಿ ಬಿಸಾಡಿ ಹೋಗುವುದು ಮಾಮೂಲಿಯಾಗಿದೆ. ಇದರಿಂದ ಶ್ರೀರಾಮ ಪುರದಿಂದ ರಮಾಬಾಯಿ ನಗರದವ ರೆಗಿನ ರಿಂಗ್ ರಸ್ತೆ, ಶಿವಪುರದಿಂದ ಶ್ರೀರಾಮ ಪುರದವರೆಗಿನ ರಸ್ತೆ ಹಾಗೂ ರಮಾ ಬಾಯಿ ನಗರದಿಂದ ಮಹದೇವಪುರದವರೆ ಗಿನ ರಸ್ತೆಯ ಎರಡೂ ಬದಿಗಳಲ್ಲಿ ಕಸದ ರಾಶಿಯೇ ಬಿದ್ದಿದೆ. ಆಹಾರ ಅರಸಿ ಬರುವ ಬಿಡಾಡಿ ದನಗಳು ಕಸವನ್ನು ರಸ್ತೆ ಮೇಲೆ ಹರಡುವುದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಕಸಕ್ಕೆ ಬೆಂಕಿ: ರಸ್ತೆಬದಿಯ ಕಸಕ್ಕೆ ಕಿಡಿ ಗೇಡಿಗಳು ಬೆಂಕಿ ಹಾಕುತ್ತಿದ್ದು, ಪರಿಸರ ಮಾಲಿನ್ಯದ ಜತೆಗೆ ಸುತ್ತಲಿನ ನಿವಾಸಿ ಗಳನ್ನು ಅನಾರೋಗ್ಯ ಭೀತಿ ಕಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಕಸ ವಿಲೇವಾರಿ ಮಾಡಿಸು ವಂತೆ ನಿವಾಸಿಗಳು ಮನವಿ ಮಾಡಿದ್ದಾರೆ.

ಶ್ರೀರಾಮಪುರದಲ್ಲಿ ಗ್ರಾಪಂ ಇದ್ದರೂ ಕಸ ವಿಲೇವಾರಿ ಆಗುತ್ತಿಲ್ಲ. ರಿಂಗ್ ರಸ್ತೆಯ ಮ್ಯಾನ್‍ಹೋಲ್ ಉಕ್ಕಿ ಹರಿದು ದುರ್ವಾ ಸನೆ ಬೀರುತ್ತಿದ್ದರೂ ಗ್ರಾಪಂ ಸಿಬ್ಬಂದಿ ಕ್ರಮ ಕೈಗೊಳ್ಳುತ್ತಿಲ್ಲ. ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು.
-ನವೀನ್, ಸ್ಥಳೀಯ ನಿವಾಸಿ