ಮೈಸೂರು ರೈಲು ನಿಲ್ದಾಣದ ಸಬ್‍ವೇ ಗೋಡೆಗಳಲ್ಲಿ ರಾಜ್ಯದ ಕಲೆ, ಸ್ಮಾರಕಗಳ ಚಿತ್ರಣ ಅನಾವರಣ

ಮೈಸೂರು: ಮೈಸೂರಿನ ರೈಲು ನಿಲ್ದಾಣದ ಸಬ್‍ವೇ ಗೋಡೆ ಗಳ ಮೇಲೆ ರಾಜ್ಯದ ಕಲೆ, ಸಂಸ್ಕೃತಿ ಹಾಗೂ ಸ್ಮಾರಕಗಳನ್ನು ಬಿಂಬಿಸುವ ಸುಂದರ ಚಿತ್ರಗಳನ್ನು ರಚಿಸಲಾಗಿದೆ.

ಪ್ಲಾಟ್‍ಫಾರಂ ನಂಬರ್ 1ರಿಂದ 6 ರವರೆಗೆ ಸಂಪರ್ಕ ಕಲ್ಪಿಸಲು ನಿರ್ಮಿಸಿ ರುವ ರೈಲು ನಿಲ್ದಾಣದ ಸಬ್‍ವೇಯ ಎರಡು ಬದಿಯ ಗೋಡೆಗಳ ಮೇಲೆ ಬೇಲೂರು, ಹಳೇಬೀಡು, ಐಹೊಳೆ, ಬಾದಾಮಿ, ಪಟ್ಟದಕಲ್ಲುಗಳಲ್ಲಿನ ಐತಿಹಾಸಿಕ ಸ್ಮಾರಕಗಳ ಚಿತ್ರವನ್ನು ಕಲಾ ವಿದರು ತಮ್ಮ ಕುಂಚದಲ್ಲಿ ಚಿತ್ರಿಸಿದ್ದಾರೆ.

ಹೊಯ್ಸಳರು ಮತ್ತು ಚಾಲುಕ್ಯರ ಆಳ್ವಿಕೆ ನೆನಪಿಸುವ ಚಿತ್ರಗಳು ಗೋಡೆ ಮೇಲೆ ಮೂಡಿರುವುದರಿಂದ ಕರ್ನಾಟಕದ ಕಲಾ ಶ್ರೀಮಂತಿಕೆಯನ್ನು ಕಂಡು ರೈಲು ಪ್ರಯಾಣಿಕರು ಸಂತಸಪಡುತ್ತಿದ್ದಾರೆ. ಬೆಂಗಳೂರಿನ ಕರಗ ಮಹೋತ್ಸವ, ವೀರಗಾಸೆ, ಡೊಳ್ಳು ಕುಣಿತ, ಯಕ್ಷಗಾನ, ಭರತನಾಟ್ಯ ಮತ್ತಿತರ ಚಿತ್ರಗಳು ನೋಡುಗರ ಗಮನ ಸೆಳೆಯುತ್ತಿವೆ.

ಮಹಿಷಾಸುರ, ನಂದಿ, ಪಾರಂಪರಿಕ ಸ್ಮಾರಕಗಳೂ ಗೋಡೆಗಳಲ್ಲಿ ಜೀವ ತಳೆದಿವೆ. ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಅಪರ್ಣ ಗರ್ಗ್ ಅವರ ಆಸಕ್ತಿಯ ಫಲವಾಗಿ ಈ ಚಿತ್ತಾರ ಸಾಕಾರಗೊಂಡಿದೆ. ಸಬ್‍ವೇಗಳಲ್ಲಿ ಓಡಾಡುವ ರೈಲ್ವೆ ಪ್ರಯಾಣಿಕರು ಹಾಗೂ ಪ್ರವಾಸಿಗರು ಗೋಡೆಗಳಲ್ಲಿ ಮೂಡಿರುವ ಚಿತ್ರಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಇದೇ ಮಾದರಿಯ ವಾಲ್ ಪೇಂಟಿಂಗ್ ಅನ್ನು ಶಿವಮೊಗ್ಗ ಟೌನ್, ದಾವಣಗೆರೆ ಮತ್ತು ಹಾಸನ ರೈಲ್ವೆ ಸ್ಟೇಷನ್‍ಗಳಲ್ಲೂ ಚಿತ್ರಿಸಲಾಗುವುದು ಎಂದು ಡಿಆರ್‍ಎಂ ತಿಳಿಸಿದರು.