ಅಹಿಂದವನ್ನು ಕಡೆಗಣಿಸಿದ ಬಿಜೆಪಿಗೆ ಮತ ಹಾಕದಿರುವಂತೆ ಹಿಂದುಳಿದ ಜಾತಿಗಳ ಒಕ್ಕೂಟದ ಮನವಿ

ಮೈಸೂರು: ಕಳೆದ ಐದು ವರ್ಷಗಳ ಆಡಳಿತ ಅವಧಿಯಲ್ಲಿ ಹಿಂದುಳಿದವರು, ಅಲ್ಪಸಂಖ್ಯಾ ತರು, ದಲಿತರನ್ನು ಕಡೆಗಣಿಸಿ, ಕೇವಲ ಮೇಲ್ವರ್ಗ ದವರಿಗೆ ಮಣೆ ಹಾಕಿರುವ ಬಿಜೆಪಿಗೆ ಮತ ನೀಡದಿರುವಂತೆ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಮನವಿ ಮಾಡಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯದ ಯಾವೊಂದು ಲೋಕಸಭಾ ಕ್ಷೇತ್ರದಲ್ಲೂ ಹಿಂದುಳಿದ ವರ್ಗದ ಒಬ್ಬರಿಗೂ ಅವಕಾಶ ನೀಡಿಲ್ಲ. ಯಾವುದೇ ಆಶ್ವಾಸನೆಗಳನ್ನೂ ಈಡೇರಿಸಿಲ್ಲ. ಅಲ್ಲದೆ ಮೇಲ್ವರ್ಗದವರಿಗೆ ಶೇ.10 ಮೀಸಲಾತಿ ಘೋಷಿಸಿ ಹಿಂದುಳಿದ ವರ್ಗಗಳನ್ನು ವಂಚಿಸಿದೆ. ಬ್ರಾಹ್ಮಣರು, ವೈಶ್ಯರಿಗೆ ಮಾತ್ರ ಅನುಕೂಲ ಕಲ್ಪಿಸಿಕೊಟ್ಟಿದೆ. ಹೀಗಾಗಿ ಬಿಜೆಪಿಯ ಯಾವೊಬ್ಬ ಅಭ್ಯರ್ಥಿಗೂ ಮತ ನೀಡದಿರುವಂತೆ ಹಿಂದುಳಿದ ವರ್ಗಗಳಿಗೆ ಅವರು ಕರೆ ನೀಡಿದರು. ಸ್ವಿಸ್ ಬ್ಯಾಂಕ್‍ನಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ರೂ. ಜಮಾ ಮಾಡುವುದಾಗಿ ಹೇಳಿದ್ದವರು 15 ಪೈಸೆಯನ್ನೂ ಖಾತೆಗೆ ಹಾಕಿಲ್ಲ. ಜಿಎಸ್‍ಟಿ, ನೋಟು ಅಮಾನ್ಯೀಕರಣದಿಂದ ಸಣ್ಣಪುಟ್ಟ ವ್ಯಾಪಾರಿಗಳು, ಬಡಜನರು ತೊಂದರೆ ಅನುಭವಿಸುವಂತಾಗಿದೆ. ಇದೆಲ್ಲವನ್ನು ಮನಗಂಡು ಹಿಂದು ಳಿದ ವರ್ಗದ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಬಾರದು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಎಣ್ಣೆಗೆರೆ ಆರ್.ವೆಂಕಟರಾಮಯ್ಯ, ಚೌಹಳ್ಳಿ ಪುಟ್ಟಸ್ವಾಮಿ, ನಾರಾಯಣಗೌಡ, ಸುಬ್ರಹ್ಮಣ್ಯ, ಕೆ.ಎಸ್.ಶಿವರಾಮು ಉಪಸ್ಥಿತರಿದ್ದರು.