ಎರಡನೇ ದಿನ ಮೂವರು ನಾಮಪತ್ರ ಸಲ್ಲಿಕೆ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಮೂವರು ಸ್ವತಂತ್ರ ಅಭ್ಯರ್ಥಿಗಳಾಗಿ ಎರಡನೇ ದಿನವಾದ ಇಂದು ನಾಮಪತ್ರಗಳನ್ನು ಸಲ್ಲಿಸಿದರು.

ಮೈಸೂರಿನ ಶ್ರೀನಿವಾಸಯ್ಯ ಹಾಗೂ ಪಿರಿಯಾ ಪಟ್ಟಣದ ಪಿ.ಯಡೂರಪ್ಪ ಅವರು ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ಪಕ್ಷೇತರರಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಮಂಗಳವಾರ ಕಾಂಗ್ರೆಸ್ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿ 2 ನಾಮಪತ್ರ ಸಲ್ಲಿಸಿದ್ದ ಅಯೂಬ್‍ಖಾನ್ ಅವರು ಇಂದೂ ಪಕ್ಷೇತರನಾಗಿ ಎರಡು ಉಮೇದುವಾರಿಕೆಯನ್ನು ಸಲ್ಲಿಸಿದರು.

ಅದರನ್ವಯ ಎರಡು ದಿನಗಳಲ್ಲಿ ಒಟ್ಟು ಐದು ಮಂದಿ ಯಿಂದ 10 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ. ಚುನಾವಣಾ ಆಯೋಗದ ನಿರ್ದೇಶನಗಳಂತೆ ಚುನಾ ವಣಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಪ್ರತಿಯೊಬ್ಬ ಅಭ್ಯರ್ಥಿಗಳಿಂಧ 4 ಮಂದಿ ಸೂಚಕರ ಸಮ್ಮುಖದಲ್ಲಿ ವಿಡಿಯೋ ಮತ್ತು ಫೋಟೋ ತೆಗೆಯುವ ಮೂಲಕ ಯಾವುದೇ ಗೊಂದಲವಿಲ್ಲದೆ ಉಮೇದುವಾರಿಕೆಯನ್ನು ಸ್ವೀಕರಿಸುತ್ತಿದ್ದಾರೆ.

ನಾಮಪತ್ರ ಸ್ವೀಕರಿಸುವ ಚುನಾವಣಾ ಪ್ರಕ್ರಿಯೆಯಲ್ಲಿ ಸಹಾಯಕ ಚುನಾವಣಾಧಿಕಾರಿಯಾದ ಜಿ.ಅನುರಾಧ ಮತ್ತು ಚುನಾವಣಾ ಶಾಖೆ ಶಿರಸ್ತೇದಾರ್ ರಾಮಪ್ರಸಾದ್ ಅವರು ಹಾಜರಿರುತ್ತಾರೆ. ಈ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಕಚೇರಿ ಸುತ್ತ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ ಭಾರಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, 100 ಮೀಟರ್ ವ್ಯಾಪ್ತಿಯ ನಿಷೇಧಾಜ್ಞೆ ವಿಧಿಸಿರುವ ಸ್ಥಳದಲ್ಲಿ 5 ಕ್ಕಿಂತ ಹೆಚ್ಚು ಮಂದಿ ಗುಂಪಾಗಿ ಸೇರದಿರುವಂತೆ ಎಚ್ಚರಿಕೆ ವಹಿಸಲಾಗಿದೆ.