ಕೊಂಬೆಗೆ ಅನುಮತಿ ಪಡೆದು ಮರವನ್ನೇ ಕತ್ತರಿಸಿದರು!

ಮೈಸೂರು,ಡಿ.20(ವೈಡಿಎಸ್)-ಅರಣ್ಯ ಇಲಾಖೆಯು ಸರಸ್ವತಿಪುರಂನ ಈಜು ಕೊಳ ರಸ್ತೆಯಲ್ಲಿನ ಮರವೊಂದರ ಕೆಲವು ಕೊಂಬೆಗಳನ್ನು ತೆಗೆಯಲು ಅನುಮತಿ ನೀಡಿ ದರೆ ಮರವನ್ನೇ ಕತ್ತರಿಸಲಾಗಿದೆ ಎಂದು ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನು ಮೋಹನ್ ಆರೋಪಿಸಿದ್ದಾರೆ. ಇಲ್ಲಿನ 7ನೇ ಮುಖ್ಯ ರಸ್ತೆ ಸಮೀಪದ ರಸ್ತೆ ಬದಿಯಲ್ಲಿ ಫೆಲ್ಟೊಫಾರಂ ಮರವಿದ್ದು, ಮನೆ ಮೇಲೆ ಹರಡಿಕೊಂಡಿರುವ ರೆಂಬೆ-ಕೊಂಬೆಗಳನ್ನು ಕತ್ತರಿಸಲು ಅನುಮತಿ ನೀಡಿತ್ತು. ಆದರೆ, ಒಂದು ಕೊಂಬೆಯೂ ಇಲ್ಲದಂತೆ ಕತ್ತರಿಸಿದ್ದಾರೆ ಎಂದು ದೂರಿದ್ದಾರೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಈ ಕುರಿತು ಗಮನ ಹರಿಸಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.